ಸುಂಟಿಕೊಪ್ಪ ಮೇ 30: ಸುಂಟಿಕೊಪ್ಪದ ಎಸ್. ಎಸ್. ಇಂಟರ್ನ್ಯಾಷನಲ್ ಸಭಾಂಗಣದಲ್ಲಿ 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕವಿಶಿಷ್ಯ ಪಂಜೆ ಮಂಗೇಶರಾಯರ ಹೆಸರಿನಲ್ಲಿ ಭವ್ಯವಾಗಿ ಸಜ್ಜುಗೊಂಡಿದ್ದ ಮುಖ್ಯ ವೇದಿಕೆಯಲ್ಲಿ, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಬಾಲ ಪ್ರತಿಭೆಗಳಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾ ಸಾಧಕರಾದ ರಾಷ್ಟ್ರೀಯ ಫುಟ್ಬಾಲ್ ತೀರ್ಪುಗಾರ ಧೀರಜ್ ಕುಮಾರ್, ಅಂತಾರಾಷ್ಟ್ರೀಯ ಹಾಕಿ ತರಬೇತುದಾರರಾದ ಅಂಕಿತ ಸುರೇಶ್, ಅಂತಾರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ ನವನೀತ ಆದರ್ಶ್ ಹಾಗೂ ಸೆಸ್ಟೋ ಬಾಲ್ ರಾಷ್ಟ್ರೀಯ ಕ್ರೀಡಾಪಟುಗಳಾದ ಇರ್ಷಾಕ್ ಮುಸ್ತಫ ಮತ್ತು ಸಾಹಿತ್ಯ ಉಸ್ಮಾನ್ ಅವರುಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರ ಪಟ್ಟಿಯಲ್ಲಿ ಸಾಹಿತ್ಯ ಕ್ಷೇತ್ರದಿಂದ ವಿರಾಜಪೇಟೆಯ ವೈಲೇಶ್ ಪಿ.ಎಸ್., ಶಿಕ್ಷಣ ಕ್ಷೇತ್ರದಿಂದ ಗೋಣಿಕೊಪ್ಪಲು ಜಿ.ಎಂ.ಪಿ.ಶಾಲೆಯ ಮುಖ್ಯೋಪಾದ್ಯಾಯರಾದ ಹೆಚ್.ಕೆ ಕುಮಾರ್, ಜ್ಞಾನ ವಿಜ್ಞಾನ ಸೇವೆಯಿಂದ ಕುಶಾಲನಗರದ ಟಿ.ಜಿ.ಪ್ರೇಮ್ ಕುಮಾರ್, ಸೇನಾ ಕ್ಷೇತ್ರದಿಂದ ಹರದೂರಿನ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ ಕುಮಾರ್, ಸಹಕಾರ ಕ್ಷೇತ್ರದಿಂದ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ, ಸಮಾಜ ಸೇವೆಯಿಂದ ಅಮ್ಮತ್ತಿಯ ಚೋಕಂಡ ಸಂಜು ಸುಬ್ಬಯ್ಯ ಹಾಗೂ ರಂಗಭೂಮಿ ಕ್ಷೇತ್ರದಿಂದ ಕುಶಾಲನಗರದ ಭರಮಣ್ಣ ಬೆಟ್ಟಗೇರಿ ಅವರುಗಳು ಗೌರವಕ್ಕೆ ಪಾತ್ರರಾದರು.

ಇವರೊಂದಿಗೆ ಜನಸೇವೆಯಲ್ಲಿ ಗುಡ್ಡೆಗೊಸೂರಿನ ಜರ್ಮಿ ಡಿಸೋಜಾ, ಉದ್ಯಮದಲ್ಲಿ ಸುಂಟಿಕೊಪ್ಪದ ಆರ್. ಶಾಂತಾರಾಮ್ ಕಾಮತ್, ಜನಪದದಲ್ಲಿ ಯವಕಪಾಡಿಯ ಕುಡಿಯರ ಶಾರದ, ಗಾಯನದಲ್ಲಿ ಬಾಳೆಲೆಯ ಅನ್ವಿತ್ ಕುಮಾರ್, ನೃತ್ಯದಲ್ಲಿ ಮಡಿಕೇರಿಯ ಎಂಜೆಲ್ ರಶ್ಮಿ, ಮಾಧ್ಯಮ ಕ್ಷೇತ್ರದಲ್ಲಿ ಕೊಡಗರಹಳ್ಳಿಯ ಬಿ.ಸಿ ದಿನೇಶ್, ಜಾನಪದ ಪರಿಕರ ವಿಭಾಗದಲ್ಲಿ ಮರಗೋಡಿನ ತೋಟಂಬೈಲು ಪಾರ್ವತಿ ಮೋಹನ್, ವೈದ್ಯಕೀಯ ಕ್ಷೇತ್ರದಲ್ಲಿ ಮಡಿಕೇರಿಯ ಡಾ.ಚೆರಿಯಮನೆ ಪ್ರಶಾಂತ್, ನಾಟಿ ವೈದ್ಯ ಪದ್ಧತಿಯಲ್ಲಿ ಗಾಳಿಬೀಡಿನ ವಿಶ್ವನಾಥ್ ರೈ, ಕೃಷಿ ಕ್ಷೇತ್ರದಲ್ಲಿ ಸಿದ್ದಲಿಂಗಪುರದ ರಾಮಣ್ಣಗೌಡ, ನೈರ್ಮಲ್ಯ ಸೇವೆಯಲ್ಲಿ ಸುಂಟಿಕೊಪ್ಪದ ಹಿರಿಯ ಪೌರಕಾರ್ಮಿಕರಾದ ಮುರುಗೇಶ್ ಹಾಗೂ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಣೆಗಾಗಿ ವಿರಾಜಪೇಟೆಯ ಎಂ.ಎನ್. ಅಜಯ್ ರಾವ್ ಅವರಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ವಿಶೇಷ ಚೇತನರ ವಿಭಾಗದಲ್ಲಿ ಅಸಾಧಾರಣ ಸಾಧನೆಗೈದ ಮಡಿಕೇರಿಯ ಕ್ರೀಡಾಪಟು ಜಂಶೆದ್, ಪಾಲಿಬೆಟ್ಟ ಚೆಶೈರ್ ಹೋಂನ ಯೋಗಾಸನ ಪಟು ಸುಮೇಶ್, ಅದೇ ಸಂಸ್ಥೆಯ ಅಧ್ಯಾಪಕರಾದ ಶಿವರಾಜ್ ಹಾಗೂ ಸುಂಟಿಕೊಪ್ಪದ ರಾಜ್ಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರ್ತಿ ಕು|| ನಿಶ್ಚಾ ಅವರನ್ನು ಸಹ ವಿಶೇಷವಾಗಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಇದರೊಂದಿಗೆ ಭವಿಷ್ಯದ ಭರವಸೆಯಾಗಿ ಮೂಡಿಬರುತ್ತಿರುವ ಬಾಲ ಪ್ರತಿಭೆಗಳಾದ ಭಾಷಣ ಕಲೆ ಕ್ಷೇತ್ರದಲ್ಲಿ ಸುಂಟಿಕೊಪ್ಪದ ಕು|| ಶ್ರೀಶ, ಟೆನ್ನಿಸ್ನಲ್ಲಿ ಕಾನ್ ಬೈಲಿನ ಕು|| ಥನುಷ್ ಶೇಖರ್, ಯೋಗದಲ್ಲಿ ಮದೆನಾಡಿನ ಕು|| ಸಿಂಚನ, ಗಾಯನದಲ್ಲಿ ಜೀ ಕನ್ನಡ ಡಿ.ಕೆ.ಡಿ ಖ್ಯಾತಿಯ ಕಲ್ಲೂರು ಗ್ರಾಮದ ಕು|| ಸುಮುಕ್, ಹಾಗೂ ದಾರ ವಿದ್ಯೆಯಲ್ಲಿ ಗೋಣಿಕೊಪ್ಪಲಿನ ಕು|| ಪ್ರದ್ಯೋತ್ ಮತ್ತು ಕುಶಾಲನಗರದ ಕು|| ಕೆ.ಎಸ್.ಚಿನ್ನಿತ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮ್ಮೇಳನಾಧ್ಯಕ್ಷರ ಅಬ್ದುಲ್ ರಶೀದ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ವೇದಿಕೆಯ ಸಮಾರಂಭದಲ್ಲಿ ಕೊಡಗು ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್, ಕಾಫಿ ಬೆಳೆಗಾರರಾದ ಟಿ.ಕೆ. ಸಾಯಿಕುಮಾರ್, ಸ್ಕೌಟ್ಸ್ ಆಂಡ್ ಗೈಡ್ಸ್ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯು, ಸಾಹಿತಿ ಫ್ಯಾನ್ಸಿ ಮುತ್ತಣ, ಕೊಡಗು ಕ.ಸಾ.ಪ. ಹಿರಿಯ ಸದಸ್ಯರಾದ ಡಿ. ನರಸಿಂಹ ಹಾಗೂ ಸುಂಟಿಕೊಪ್ಪ, ಕೆದಕಲ್, ಚೆಟ್ಟಳ್ಳಿ ಮತ್ತು ಕಂಬಿಬಾಣೆ ಗ್ರಾಮ ಪಂಚಾಯಿತಿಗಳ ಮಾಜಿ ಜನಪ್ರತಿನಿಧಿಗಳಾದ ಕೆ.ಇ. ಕರೀಂ, ಎಂ.ಎ. ಉಸ್ಮಾನ್, ಶಿವಮ್ಮ ಮಹೇಶ್, ಬಿ.ಕೆ. ಮೋಹನ್, ಸದಾಶಿವ ರೈ, ಪಿ.ಆರ್. ಸುಕುಮಾರ, ಬಾಲಕೃಷ್ಣ ರೈ, ಮೂಡಳ್ಳಿ ರವಿ, ಆರ್.ಆರ್. ಮೋಹನ್ ಮತ್ತು ಎಂ. ಮಂಜುನಾಥ್ ಮತ್ತಿತರ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡಿದ್ದರು.




