ಮಡಿಕೇರಿ ಜೂ.14: ಸುಳ್ಯ ತಾಲೂಕಿನ ಆಂಬ್ಯುಲೆನ್ಸ್ ಚಾಲಕ ಹಾಗೂ ಮಾಲಿಕರ ಸಂಘ, ಸುಳ್ಯ ಸರ್ಕಾರಿ ಆಸ್ಪತ್ರೆ ಮತ್ತು ಜೆಸಿಐ ಸುಳ್ಯ ಪಯಸ್ವಿನಿ ಘಟಕದ ಜಂಟಿ ಆಶ್ರಯದಲ್ಲಿ ಹಾಗೂ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ವಿಶೇಷ ಶಿಬಿರದಲ್ಲಿ ಮಡಿಕೇರಿ ಆಕಾಶವಾಣಿಯ ಉದ್ಗೋಷಕರು, ಕಲಾವಿದರು ಹಾಗೂ ಪತ್ರಕರ್ತರಾದ ಯುವಕ ವಿನೋದ್ ಮೂಡಗದ್ದೆ ಅವರು ಪಾಲ್ಗೊಂಡು ತಾವು 22ನೇ ಬಾರಿಗೆ ರಕ್ತದಾನವನ್ನು ಮಾಡುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾದರು.

ಅಪಘಾತಗಳು, ಹೆರಿಗೆಯ ಸಂದರ್ಭಗಳು ಹಾಗೂ ಥಲಸೇಮಿಯಾದಂತಹ ಗಂಭೀರ ಕಾಯಿಲೆಗಳಿಂದ ಬಳಲುವ ರೋಗಿಗಳ ಜೀವ ಉಳಿಸಲು ರಕ್ತದಾನ ಅತ್ಯಂತ ಅತ್ಯಗತ್ಯವಾಗಿದೆ. ಒಬ್ಬರು ಮಾಡುವ ರಕ್ತದಾನವು ಮೂರು ಜೀವಗಳನ್ನು ಉಳಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ದೇಹದಲ್ಲಿ ಚುರುಕುತನ ಮೂಡುತ್ತದೆ. ರಕ್ತದಾನವು ಕೇವಲ ಒಂದು ದಾನವಲ್ಲ, ಅದು ಸಮಾಜದ ಕಡೆಗಿನ ನಮ್ಮ ಜವಾಬ್ದಾರಿ ಎಂದು ಕೊಡಗು ವರದಿ ಮಾಧ್ಯಮದೊಂದಿಗೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶಿಬಿರದ ಸಮಾರಂಭದಲ್ಲಿ ಸರ್ಕಾರಿ ಆಸ್ಪತ್ರೆ ಸುಳ್ಯದ ವೈದ್ಯಾಧಿಕಾರಿ ಡಾ. ನವೀನ್ ಎನ್.ಎಸ್., ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ಜೆಸಿ ವಲಯ ತರಬೇತುದಾರರು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಕನ್ನಡ ಪ್ರಾಧ್ಯಪಕರಾದ ಡಾ. ಅನುರಾಧ ಕುರುಂಜಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಜೆಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಅಶೋಕ್ ಚೂಂತಾರ್, ದಿನೇಶ್ ಮಡಪ್ಪಾಡಿ, ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಶರತ್ ಕುಮಾರ್ ಅರಂತೋಡು ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ.ಪಿ., ಹಾಗೂ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷರಾದ ಲತಾಶ್ರೀ ಸುಪ್ರೀತ್ ಮೊಂಟಡ್ಕ ಉಪಸ್ಥಿತರಿದ್ದು ಜೀವ ಉಳಿಸುವಲ್ಲಿ ರಕ್ತದಾನದ ಪಾತ್ರದ ಕುರಿತು ಮಾತನಾಡಿ, ಸಮಾಜಮುಖಿ ಕಾರ್ಯಗಳಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಸುಳ್ಯ ಸರಕಾರಿ ಆಸ್ಪತ್ರೆಯ ಡಾ. ಶಾಲಿನಿ, ಡಾ ಸೌಮ್ಯ, ಡಾ. ರಜನಿ, ಡಾ. ಶಿವಕುಮಾರ್ ರಕ್ತದಾನದ ಮಹತ್ವವನ್ನು ತಿಳಿಸಿದರು.
ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ವೆಸ್ಲಾಕ್ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳ ತಂಡ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಶಿಬಿರದ ಯಶಸ್ಸಿಗೆ ಜೇಸಿಐ ಸದಸ್ಯರು, ಆಸ್ಪತ್ರೆಯ ಸಿಬ್ಬಂದಿಗಳು, ಆಂಬ್ಯುಲೆನ್ಸ್ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸ್ವಯಂಸೇವಕರು ಸಹಕರಿಸಿದರು.




