ಮಡಿಕೇರಿ ಜೂ.15 : ನಿನ್ನೆ ದಿನ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಾರ್ಷಿಕ ‘ಕಾರುಣ್ಯ ಕಾರ್ಯಕ್ರಮ’ ದಲ್ಲಿ ಬಡತನ ಹಾಗೂ ಅನಾರೋಗ್ಯದ ಬವಣೆಯಿಂದ ಕಷ್ಟ ಅನುಭವಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ನೆರವಾಗುವ ಮೂಲಕ ‘ಮಾನವೀಯ ಸ್ನೇಹಿತರ ಒಕ್ಕೂಟ’ ಸಂಘಟನೆಯು ಮಾನವೀಯತೆ ಮೆರೆಯಿತು.

ಸಾರ್ವಜನಿಕರಿಂದ ಯಾವುದೇ ದೇಣಿಗೆಯನ್ನು ಪಡೆಯದೆ, ಕೇವಲ ವಾಟ್ಸಾಪ್ ಗ್ರೂಪ್ ಸದಸ್ಯರ ಸ್ವಯಂಪ್ರೇರಿತ ಸಹಕಾರದೊಂದಿಗೆ ಒಟ್ಟು 3,00,000 ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ಸುಮಾರು 70ಕ್ಕೂ ಅಧಿಕ ಅರ್ಹ ಫಲಾನುಭವಿಗಳಿಗೆ ಉತ್ತಮ ದರ್ಜೆಯ ಆಹಾರದ ಕಿಟ್, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ತಲಾ 5 ಸಾವಿರ ರೂಪಾಯಿ ಧನಸಹಾಯ ಹಾಗೂ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರಗಳನ್ನು ವಿತರಿಸಲಾಯಿತು.

ಒಕ್ಕೂಟದ ವಕ್ತಾರ ಶಶಿಕುಮಾರ್ ಚೆಟ್ಟಳ್ಳಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಎಂ. ನಂದಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಕ್ಕೂಟದ ಸಾಮಾಜಿಕ ಕಾರ್ಯಗಳು ಹಾಗೂ ಜನಪರ ಕಾಳಜಿಯನ್ನು ಶ್ಲಾಘಿಸಿದರು.
ನಡೆಯಲು ಅಶಕ್ತರಾಗಿದ್ದ ರೋಗಿಗಳನ್ನು ಒಕ್ಕೂಟದ ಕಾರ್ಯಕರ್ತರೇ ಎತ್ತಿಕೊಂಡು ಬಂದು ಸಭಾಂಗಣದಲ್ಲಿ ಕೂರಿಸಿ ಸವಲತ್ತು ನೀಡಿದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಅವರು, ಸಾರ್ವಜನಿಕ ದೇಣಿಗೆ ಇಲ್ಲದೆ ವಾಟ್ಸಾಪ್ ಗ್ರೂಪ್ ಮೂಲಕ ಇಷ್ಟು ದೊಡ್ಡ ಮೊತ್ತದ ಸೇವೆ ಮಾಡಿರುವುದು ನಿಜಕ್ಕೂ ವಿಸ್ಮಯ ಎಂದು ಶ್ಲಾಘಿಸಿದರೆ, ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕ ಡಾ. ಮುಸ್ತಫ ಮಾದಾಪುರ ಅವರು ಒಕ್ಕೂಟದ ಚಟುವಟಿಕೆಗಳು ಸಮಾಜಕ್ಕೆ ಮಾದರಿ ಎಂದರು.
ಕಡ್ಲೇರ ತುಳಸಿ ಮೋಹನ್ ಅವರ ಧ್ಯೇಯ ಗೀತೆಯೊಂದಿಗೆ ಆರಂಭವಾದ ಸಮಾರಂಭದಲ್ಲಿ ಎಂ. ಇ ಮಹಮದ್ ವರದಿ ವಾಚಿಸಿದರು, ಇಂದಿರಾ ಎ.ಎಚ್. ಸ್ವಾಗತಿಸಿದರು, ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು ಮತ್ತು ಟಿ.ಆರ್. ವಿನೋದ್ ವಂದನಾರ್ಪಣೆ ಮಾಡಿದರು.
ಒಕ್ಕೂಟದ ಸ್ಥಾಪಕ ಅಡ್ಮಿನ್ ಅನಿಲ್ ರೈ, ದಾನಿಗಳಾದ ಅಮಿತ್ ಡಿಸೋಜಾ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




