ಸುಂಟಿಕೊಪ್ಪ ಜೂ 29: ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ವತಿಯಿಂದ ನೀಡಲಾಗುವ, ಪುಲಿಯಂಡ ರಾಮ್ ದೇವಯ್ಯ ಅವರು ಜ್ಞಾನಗಂಗಾ ಶಾಲೆಯ ಹೆಸರಿನಲ್ಲಿ ಸ್ಥಾಪಿಸಿರುವ ವಾರ್ಷಿಕ ದತ್ತಿ ಪ್ರಶಸ್ತಿಗೆ ಸುಂಟಿಕೊಪ್ಪದ ಹಿರಿಯ ವರದಿಗಾರರಾದ ಎಂ.ಬಿ.ವಿನ್ಸೆಂಟ್ ಅವರು ಭಾಜನರಾಗಿದ್ದಾರೆ.
ಮುಂದಿನ ಜುಲೈ ತಿಂಗಳ 4ನೇ ತಾರಿಕಿನಂದು ಪೂರ್ವಾಹ್ನ 11 ಗಂಟೆಗೆ ಗುಡ್ಡೆಹೊಸೂರಿನ ಐಶ್ವರ್ಯ ಪಬ್ಲಿಕ್ ಶಾಲೆಯಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಹಾಗೂ ಐಶ್ವರ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ.ದಿನೇಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕೊಡಗು ಪತ್ರಿಕಾಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹಾಗೂ ‘ಸಂಯುಕ್ತ ಕರ್ನಾಟಕ’ ಜಿಲ್ಲಾ ವರದಿಗಾರ ಎಸ್.ಜಿ.ಉಮೇಶ್ ಅವರು ದಿನದ ಮಹತ್ವದ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ.
ಅತಿಥಿಗಳಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ.ಆರ್.ಸುಮೇಶ್, ಐಶ್ವರ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅಮ್ಮಾಟಂಡ ಎ. ಜೋಯಪ್ಪ ಹಾಗೂ ಸುಂಟಿಕೊಪ್ಪ ನಾಡ ಕಚೇರಿ ಕಂದಾಯ ಪರಿವೀಕ್ಷಕ ಎಂ.ಎಚ್.ಪ್ರಶಾಂತ್ ಅವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕವು ಪ್ರಕಟಣೆಯಲ್ಲಿ ತಿಳಿಸಿದೆ.




