ಹಾಸನ ಜೂ.29 : ಇಂದಿನ ವೇಗದ ಯುಗದಲ್ಲಿ ಸುದೀರ್ಘ ಸಾಹಿತ್ಯವನ್ನು ಓದಲು ಸಮಯವಿಲ್ಲದ ಜನರಿಗೆ ಚುಟುಕು ಸಾಹಿತ್ಯವು ಅತ್ಯಂತ ಉಪಯುಕ್ತವಾಗಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ವಿಚಾರಗಳನ್ನು ಮನಸ್ಸಿಗೆ ತಲುಪಿಸುವ ಅದ್ಭುತ ಶಕ್ತಿ ಈ ಪ್ರಕಾರಕ್ಕಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ಅವರು ಅಭಿಪ್ರಾಯಪಟ್ಟರು.
ನಗರದ ಎ.ವಿ.ಕೆ. ಕಾಲೇಜಿನ ಸಭಾಂಗಣದಲ್ಲಿ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಡಾ. ರತ್ನ ಹಾಲಪ್ಪಗೌಡ ಅವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಚೊಚ್ಚಲ ಚುಟುಕು ಸಾಹಿತ್ಯ ಸಮ್ಮೇಳನದ ‘ಚುಟುಕು ಸಾಹಿತ್ಯ, ಬದುಕಿಗೆ ಲಾಲಿತ್ಯ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲವೇ ಸಾಲುಗಳಲ್ಲಿ ಆಳವಾದ ಜೀವನತತ್ತ್ವ, ಹಾಸ್ಯ, ನೀತಿ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವಿರುವ ಚುಟುಕು ಸಾಹಿತ್ಯವು ಬದುಕಿಗೆ ಸೊಬಗು, ಚಿಂತನೆ ಹಾಗೂ ಸಂಸ್ಕಾರವನ್ನು ನೀಡುತ್ತದೆ. ಬದುಕಿನ ಸತ್ಯಗಳನ್ನು ಸರಳ ಪದಗಳಲ್ಲಿ ತಿಳಿಸುತ್ತಾ, ಓದುಗರನ್ನು ಕೆಲವೊಮ್ಮೆ ನಗಿಸಿ, ಮತ್ತೊಮ್ಮೆ ಎಚ್ಚರಿಸುವ ಮೂಲಕ ಜೀವನವನ್ನು ಉತ್ತಮಗೊಳಿಸಲು ಇದು ಪ್ರೇರೇಪಿಸುತ್ತದೆ ಎಂದ ಅವರು, ಯಾವುದೇ ಸರ್ಕಾರಿ ಅನುದಾನವಿಲ್ಲದಿದ್ದರೂ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್ ಅವರ ಸಾಮುದಾಯಿಕ ಪ್ರೀತಿ ಮತ್ತು ನಿಸ್ವಾರ್ಥ ಸೇವೆಯಿಂದಾಗಿ ಇಂತಹ ಅದ್ಭುತ ಸಮ್ಮೇಳನ ಯುವ ಕವಿಗಳಿಗೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದು ಶ್ಲಾಘಿಸಿದರು.
ಇದೇ ಗೋಷ್ಠಿಯಲ್ಲಿ ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಆರ್. ಆದರ್ಶ ಅವರು ‘ಅನುಭವದ ಅಮೃತ-ಚುಟುಕುವಿನ ಬಟ್ಟಲಲ್ಲಿ’, ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿಯವರು ‘ಚುಟುಕು ಚುರುಕು- ನಗುತ ನಾಟುವ ಸಾಹಿತ್ಯ’, ಶಿವಮೊಗ್ಗ ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ಎಂ.ಎನ್. ಸುಂದರ್ರಾಜ್ ಅವರು ‘ಬಿಂದು ಸಿಂದುವಾದಂತೆ – ಚುಟುಕುವಿನಲ್ಲಿ ಜೀವನ ದರ್ಶನ’ ಹಾಗೂ ಸಾಹಿತಿ ಸೌಮ್ಯ ಬಾನಾಡಿ ಅವರು ‘ಚುಟುಕು : ಸಣ್ಣ ಸಾಲುಗಳ ದೊಡ್ಡದನಿ’ ಎಂಬ ವಿಷಯಗಳ ಕುರಿತು ಅತ್ಯಂತ ಪ್ರಭಾವಶಾಲಿಯಾಗಿ ವಿಚಾರ ಮಂಡಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್, ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಜಿ.ಆರ್. ಅರಸ್, ಕಸಾಪ ನಿಕಟಪೂರ್ವ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು, ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ಸಾಹಿತಿಗಳಾದ ಪದ್ಮಮೂರ್ತಿ, ಕಾತ್ಯಾಯಿನಿ ತೆವರೀಮಠ್, ಸುಧಾ ಕಲ್ಯಾಣ್ ಮತ್ತು ಹರೀಶ್ ಕುಮಾರ್ ಅವರುಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.




