ಸೋಮವಾರಪೇಟೆ ಜೂ.29: ಅರ್ಹ ಫಲಾನುಭವಿಗಳಿಗೆ ತಾಂತ್ರಿಕ ಅಥವಾ ಇತರೆ ಕಾರಣಗಳಿಂದ ಸ್ಥಗಿತಗೊಂಡಿರುವ ಸರ್ಕಾರದ ವಿವಿಧ ಮಾಸಾಶನ (ಪೆನ್ಷನ್) ಯೋಜನೆಗಳನ್ನು ಪುನಃ ಪ್ರಾರಂಭಿಸಲು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಘಟಕವು ಉಚಿತ ಸಹಾಯ ಹಸ್ತ ಚಾಚಿದೆ.
ಸರ್ಕಾರದ ವೃದ್ಧಾಪ್ಯ, ವಿಧವೆ ಹಾಗೂ ಅಂಗವಿಕಲ ವೇತನ ಸೇರಿದಂತೆ ವಿವಿಧ ಪೆನ್ಷನ್ಗಳು ನಿಂತುಹೋಗಿ ಕಷ್ಟಪಡುತ್ತಿರುವ ಸಾರ್ವಜನಿಕರ ನೆರವಿಗಾಗಿ ಸಂಘಟನೆಯು ವಿಶೇಷ ಉಚಿತ ಸೇವೆಯನ್ನು ಹಮ್ಮಿಕೊಂಡಿದೆ.
ಪೆನ್ಷನ್ ಸ್ಥಗಿತಗೊಂಡಿರುವ ಫಲಾನುಭವಿಗಳು ಮೊದಲು ಹತ್ತಿರದ ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ವಾರ್ಷಿಕ ಆದಾಯ ₹32,000 ಒಳಗಿದೆಯೇ ಎಂದು ಪರಿಶೀಲಿಸಿಕೊಳ್ಳಬೇಕು. ಬಳಿಕ ಆಧಾರ್ ಕಾರ್ಡ್, ಪೆನ್ಷನ್ ಆದೇಶದ ಪ್ರತಿ, ರೇಷನ್ ಕಾರ್ಡ್, ಒಂದು ಫೋಟೋ, ಬ್ಯಾಂಕ್ ಪಾಸ್ ಬುಕ್ ಹಾಗೂ ಮತದಾರರ ಗುರುತಿನ ಚೀಟಿಯೊಂದಿಗೆ (Voter ID) ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು (VA) ಭೇಟಿ ಮಾಡಬೇಕಾಗುತ್ತದೆ.
ಈ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ತಾವೇ ಖುದ್ದಾಗಿ ಫಲಾನುಭವಿಗಳ ಜೊತೆಯಲ್ಲೇ ನಿಂತು ಸರ್ಕಾರದಿಂದ ಬರುವ ಪೆನ್ಷನ್ ಅನ್ನು ಉಚಿತವಾಗಿ ಸರಿಪಡಿಸಿಕೊಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಭಾಗಗಳ ಸಾರ್ವಜನಿಕರು ನೆರವಿಗಾಗಿ ಸೋಮವಾರಪೇಟೆಯ ಕರವೇ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ (9686095831) ಅವರನ್ನು ಸಂಪರ್ಕಿಸಬಹುದು. ಹಾಗೆಯೇ ಕುಶಾಲನಗರ ವ್ಯಾಪ್ತಿಯಲ್ಲಿ ರಾಜಶೇಖರ್ ಗೌಡ (9980289757), ಚಂದ್ರು (9845210746), ಜಯಶ್ರೀ ಮುರುಗೇಶ್ (9880179696), ಹಾಗೂ ಶಿವು (9480996079) ಅವರನ್ನು ಸಂಪರ್ಕಿಸಬಹುದಾಗಿದೆ. ನೆಲ್ಲಿಹುದಿಕೇರಿ ಮತ್ತು ಸಿದ್ದಾಪುರ ಭಾಗದ ಜನರಿಗೆ ಹರೀಶ್ (9481951800) ಮತ್ತು ಸಜೀಲ್ (7022890566) ಅವರು ನೆರವು ನೀಡಲಿದ್ದು, ಅರ್ಹ ಬಡ ಕುಟುಂಬಗಳು ಹಾಗೂ ಹಿರಿಯ ನಾಗರಿಕರು ಈ ಉಚಿತ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೊಡಗು ಕರವೇ (ಸ್ವಾಭಿಮಾನಿ ಬಣ) ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




