ವಿರಾಜಪೇಟೆ ಮೇ. 19 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಸಲಾಗುವ ವಿರಾಜಪೇಟೆ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕೋರ್ ಕಮಿಟಿ ಸಭೆಯನ್ನೂ ವಿರಾಜಪೇಟೆಯ ಶಿಕ್ಷಕರ ಭವನದಲ್ಲಿ ಆಯೋಜಿಸಲಾಗಿತ್ತು.
ಈ ಶೌರ್ಯ ಕಾರ್ಯಕ್ರಮ ಯೋಜನಾಧಿಕಾರಿಗಳಲಾದ ಜೈವಂತ್ ಪಟಗಾರ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ , ಕರ್ನಾಟಕ ರಾಜ್ಯದಲ್ಲಿ ಕಳೆದ 6 ವರ್ಷಗಳಿಂದ ಶೌರ್ಯ ವಿಪತ್ತು ನಿರ್ವಹಣಾ ಘಟಕವು ಆರಂಭವಾಗಿ ಇಂದಿಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಹ ಕೆಲಸವಾಗಿದೆ,
ರಾಜ್ಯದ 89 ತಾಲೂಕುಗಳನ್ನು ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅವುಗಳಲ್ಲಿ ವಿರಾಜಪೇಟೆ ತಾಲೂಕು ಕೂಡ ಒಂದಾಗಿದೆ, ಮುಂದಿನ ದಿನಗಳಲ್ಲಿ ಅನಿರೀಕ್ಷಿತ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಲು ಸ್ವಯಂ ಸೇವಕರು ಸಜ್ಜಾಗಬೇಕು ಎಂದರು.
ಕ್ಷೇತ್ರ ಯೋಜನಾಧಿಕಾರಿಗಳಾದ ಹರೀಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ವಿರಾಜಪೇಟೆ ತಾಲೂಕಿನಲ್ಲಿ ಶೌರ್ಯ ಕಾರ್ಯಕ್ರಮ 5 ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದೆ ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಶೌರ್ಯ ಘಟಕಗಳು ರಾಜ್ಯದ ಅತ್ಯುತ್ತಮ ಸಾಧಕ ಘಟಕಗಳಲ್ಲಿ ಒಂದಾಗಬೇಕು ಎಂದರು.
ಜನಜಾಗೃತಿ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯರವರು ಘಟಕಗಳು ಸಮರ್ಪಕವಾಗಿ ನಡೆಯಲು ಅತ್ಯುತ್ತಮವಾದ ಯೋಜನೆಯನ್ನು ರೂಪಿಸಿಕೊಳ್ಳಬೇಕು, ಉತ್ತಮ ಶ್ರಮದಾನಗಳನ್ನು ಕೈಗೊಳ್ಳಬೇಕು, ಅತ್ಯುತ್ತಮವಾದ ಸಂವಹನ ಕಲೆಯನ್ನು ಹೊಂದಿರಬೇಕು, ಕಾರ್ಯ ಚಟುವಟಿಕೆಗಳ ಉತ್ತಮ ದಾಖಲೀಕರಣವನ್ನು ಮಾಡಬೇಕು, ಪೂರಕವಾದ ಬಜೆಟ್ ಹಾಕಿಕೊಂಡಲ್ಲಿ ನಮ್ಮ ಘಟಕಗಳು ಅತ್ಯುತ್ತಮವಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಹಾಗೆಯೇ ವಿರಾಜಪೇಟೆ ತಾಲೂಕಿನಲ್ಲಿ ನೂತನವಾಗಿ 15 ಜನರ ತುರ್ತು ಸ್ಪಂದನ ಘಟಕ ರಚನೆ ಮಾಡಿ, ಅವರಿಗೆ ಕರ್ತವ್ಯದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಸಭೆಯಲ್ಲಿ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಕೆ, ಆಡಳಿತ ಪ್ರಬಂಧಕರಾದ ಕು. ಮಮತಾ , ವಿರಾಜಪೇಟೆ ತಾಲೂಕಿನ ಮೇಲ್ವಿಚಾರಕರು, ಸಂಯೋಜಕರು, ಘಟಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಧನೇಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಪುಷ್ಪಲತಾ ವಂದಿಸಿದರು




