ಕುಶಾಲನಗರ ಜೂ.27 : ಮೈಸೂರು ವಿಭಾಗೀಯ ಮಟ್ಟದ S.I.R (ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ) ಸಂಬಂಧ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಾಳೆ (ಜೂನ್ 28, ಭಾನುವಾರ) ಮೈಸೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ವಿ. ಪಿ. ಶಶಿಧರ್ ತಿಳಿಸಿದ್ದಾರೆ.
ಮೈಸೂರಿನ ರೈಲ್ವೆ ನಿಲ್ದಾಣದ ಎದುರಿಗಿರುವ ಪ್ರಸಿದ್ಧ ಜೆ.ಕೆ. ಮೈದಾನದಲ್ಲಿ ಪೂರ್ವಾಹ್ನ 11:00 ಗಂಟೆಗೆ ಈ ಬೃಹತ್ ಸಮಾವೇಶ ಜರುಗಲಿದೆ. ಪಕ್ಷದ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್, ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಲವು ಸಚಿವರು, ಶಾಸಕರು ಹಾಗೂ ಪಕ್ಷದ ಉನ್ನತ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ
.ಈ ಸಮಾವೇಶದಲ್ಲಿ ಭಾಗವಹಿಸಲು ಕುಶಾಲನಗರ ಬ್ಲಾಕ್ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರಿಗಾಗಿ ವಿಶೇಷ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ. ಮೊದಲ ಬಸ್ ಶಿರಂಗಾಲ, ತೊರೆನೂರು ಹಾಗೂ ಹೆಬ್ಬಾಲೆ ಭಾಗದಿಂದ ಹೊರಡಲಿದ್ದು, ಎರಡನೇ ಬಸ್ ಕುಶಾಲನಗರದ ಬ್ಲಾಕ್ ಕಾಂಗ್ರೆಸ್ ಕಛೇರಿಯಿಂದ ಬೆಳಿಗ್ಗೆ ಸರಿಯಾಗಿ 9:00 ಗಂಟೆಗೆ ಹೊರಡಲಿದೆ. ಕೂಡಿಗೆ, ಕೂಡು ಮಂಗಳೂರು ಹಾಗೂ ನಗರ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರು ಈ ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಬ್ಲಾಕ್ ವ್ಯಾಪ್ತಿಯ ಎಲ್ಲಾ ಬಿ.ಎಲ್.ಎ (BLA) ಗಳು, ವಲಯ ಘಟಕದ ಅಧ್ಯಕ್ಷರು, ಕೆ.ಪಿ.ಸಿ.ಸಿ, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಮತ್ತು ನಾಮಕರಣಗೊಂಡ ಎಲ್ಲಾ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕಾಗಿ ವಿ. ಪಿ. ಶಶಿಧರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.




