ಭಾಗಮಂಡಲ ಜೂ.22: ಕೊಡಗು ಜಿಲ್ಲೆಯ ಗಡಿ ಗ್ರಾಮ ಹಾಗೂ ಕೇರಳ ಗಡಿಯ ಸಮೀಪದಲ್ಲಿರುವ ಕರಿಕೆ ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರ ಮತ್ತು ಪ್ರೌಢಶಾಲಾ ವಿಭಾಗಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಹಾಗೂ ಅಧಿಕಾರಿಗಳ ತಂಡ ಇತ್ತೀಚೆಗೆ ಭೇಟಿ ನೀಡಿ ವಿವಿಧ ಆರೋಗ್ಯ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸಿದ್ದರು.

ಇದೇ ಸಂದರ್ಭ ಶಾಲೆಗೆ ಭೇಟಿ ನೀಡಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಸುನಿಲ್ ಅವರು ಮಕ್ಕಳ ಆರೋಗ್ಯದ ಕುರಿತು ವಿಚಾರಿಸಿ, ಹೆಣ್ಣುಮಕ್ಕಳಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ HPV ಲಸಿಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಬಳಿಕ ಕರಿಕೆಯ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ 14 ವರ್ಷ ಮೇಲ್ಪಟ್ಟ ಹಾಗೂ 15 ವರ್ಷದೊಳಗಿನ ಅರ್ಹ ವಿದ್ಯಾರ್ಥಿನಿಯರಿಗೆ ಈ ಲಸಿಕೆಯನ್ನು ನೀಡಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ‘ನಶಾ ಮುಕ್ತ ಅಭಿಯಾನ’ ಹಾಗೂ ‘ಅತಿಸಾರ ಬೇಧಿ ನಿಯಂತ್ರಣ’ ಅಭಿಯಾನದ ಕುರಿತು ಜಾಗೃತಿ ಮೂಡಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಶಾಂತಿ ಅವರು ಮಾತನಾಡಿ, ಜೂನ್ ತಿಂಗಳ ಮಲೇರಿಯಾ ಮಾಸಾಚರಣೆಯ ಅಂಗವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ತಡೆಗಟ್ಟುವಿಕೆ ಬಗ್ಗೆ ವಿವರಿಸಿದ್ದಲ್ಲದೆ, ಜೂನ್ 28ರಂದು ನಡೆಯಲಿರುವ ‘ಪೋಲಿಯೋ ಭಾನುವಾರ’ ಅಭಿಯಾನದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿಗಳಾದ ಡಾ. ರಾಜೇಶ್ವರಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜಶೇಖರ್, ಪ್ರಯೋಗಶಾಲಾ ತಂತ್ರಜ್ಞರಾದ ಧನುಶ್ರೀ, ಆಶಾ ಕಾರ್ಯಕರ್ತೆ ಮೇನಕ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




