ಗೋಣಿಕೊಪ್ಪ ಜು15: ಪೆರಂಬಾಡಿ ಗಡಿ ತಪಾಸಣಾ ಕೇಂದ್ರದ ದುಸ್ಥಿತಿಯ ಬಗ್ಗೆ ಕೊಡಗು ಜನ ಅಭಿವೃದ್ಧಿ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ.
ಕೇರಳದ ಕೂಟುಪುಳ ಗಡಿಯಲ್ಲಿ ಪ್ರತಿ ವಾಹನಕ್ಕೂ ಕಟ್ಟುನಿಟ್ಟಿನ ತಪಾಸಣೆ ಮತ್ತು ಪೊಲೀಸ್ ಕಣ್ಗಾವಲು ಇದ್ದರೆ, ಕರ್ನಾಟಕದ ಗಡಿ ಪ್ರದೇಶ ಪೆರಂಬಾಡಿ ಬದಿಯಲ್ಲಿ ಮಾತ್ರ ಶಿಥಿಲ ಕಟ್ಟಡಗಳು, ನಿರ್ಜೀವ ಕಚೇರಿಗಳು ಹಾಗೂ ದುರ್ಬಲ ತಪಾಸಣಾ ವ್ಯವಸ್ಥೆ ಕಂಡುಬಂದಿದೆ. ಸದ್ಯ ಗಡಿಯಲ್ಲಿ ಕೇವಲ ಒಬ್ಬ ಪೊಲೀಸ್ ಮತ್ತು ಒಬ್ಬ ಅಬಕಾರಿ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದು, ಇದು ರಾಜ್ಯದ ಭದ್ರತೆಗೆ ಗಂಭೀರ ಅಪಾಯವನ್ನು ತಂದೊಡ್ಡಿದೆ ಎಂದು ಸಮಿತಿ ಆಕ್ಷೇಪಿಸಿದೆ.



ಅಧಿಕಾರಿಗಳ ಕೊರತೆಯಿಂದಾಗಿ ವಾಹನ ತಪಾಸಣೆಯಲ್ಲಿ ಲೋಪ ಉಂಟಾಗುತ್ತಿದ್ದು, ಹೊರರಾಜ್ಯಗಳಿಂದ ಬರುವ ಆಹಾರ ಪದಾರ್ಥಗಳು ಗುಣಮಟ್ಟದ ಮಾನದಂಡಗಳನ್ನು ಪಾಲಿಸುತ್ತಿವೆಯೇ ಮತ್ತು ಅಬಕಾರಿ ನಿಯಮಗಳು ಸರಿಯಾಗಿ ಜಾರಿಯಾಗುತ್ತಿವೆಯೇ ಎಂಬ ತೀವ್ರ ಶಂಕೆ ಮೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ ಸಮಿತಿಯ ಸಂಸ್ಥಾಪಕರಾದ ಎಂ. ಎಂ. ದಾವೂದ್ ಅವರು ಗಡಿ ಭದ್ರತೆಯನ್ನು ಬಲಪಡಿಸುವಂತೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಬಹಿರಂಗ ಮನವಿ ಮಾಡಿದ್ದಾರೆ.




