ಕೊಡ್ಲಿಪೇಟೆ ಡಿ21: ವಿಶ್ವ ಆರೋಗ್ಯ ಸಂಸ್ಥೆಯು ಪೋಲಿಯೊ ಮುಕ್ತ ರಾಷ್ಟ್ರ ಎಂದು ಭಾರತವನ್ನು ಘೋಷಿಸಿದ್ದು, ಇದು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಬಹು ದೊಡ್ಡ ಗೆಲುವು ಸಾಧಿಸಿದ ದೇಶ ನಮ್ಮ ಭಾರತ ಎಂಬ ಗರಿಮೆ ಪಾತ್ರವಾಗಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಜ಼ಮೀರ್ ಅಹಮದ್ ಅವರು ಶ್ಲಾಘಿಸಿದರು.
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್.ಸಿ.ಹೆಚ್., ವಿಭಾಗ, ಕೊಡಗು ಜಿಲ್ಲೆಯ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡ್ಲಿಪೇಟೆ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಲಿಯೋ ದಿನ – 2025 ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಉಪನ್ಯಾಸಕರುಗಳಾದ ಡಾ. ಜ಼ಮೀರ್ ಅಹಮದ್, ಡಾ. ನಗ್ಮಾಭಾನು ದಂಪತಿಗಳು ತಮ್ಮ ಮಗನಿಗೆ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಾತನಾಡಿದ ಅವರು, ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳ ಕಾಲ ‘ರಾಷ್ಟ್ರೀಯ ಪಲ್ಸ್ ಪೋಲಿಯೋ’ ಕಾರ್ಯಕ್ರಮ ಜರುಗಲಿದ್ದು, ಪ್ರಾಥಮಿಕವಾಗಿ ಪುಟ್ಟ ಮಕ್ಕಳ ಮೇಲೆ ಪರಿಣಾಮ ಬೀರುವ ದುರ್ಬಲ ಮತ್ತು ಕೆಲವೊಮ್ಮೆ ಮಾರಕ ಕಾಯಿಲೆಯಾಗಿರುವ ಪೋಲಿಯೊ ವೈರಸ್ ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಪ್ರಾರಂಭಿಸಲಾದ ಪಲ್ಸ್ ಪೋಲಿಯೊ ಲಸಿಕೆ ದಿನದಂದು ದೇಶಾದ್ಯಂತ ಲಕ್ಷಾಂತರ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಇದರಿಂದ ಪೋಲಿಯೊ ಪ್ರಕರಣಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಶುಶ್ರೂಷಕಿ ದೇವಮ್ಮ, ಅಂಗನವಾಡಿ ಶಿಕ್ಷಕಿಯರಾದ ಮಂಜುಳಾ, ನಿರ್ಮಲಾ, ನಜ್ಮಾ, ಆಶಾ ಕಾರ್ಯಕರ್ತೆ ಅನಿತಾ ಅವರು, ಎಸಳೂರು ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಮಹೇಶ್ ಬಾಬು, ಸುಮಾ ಡಿ.ಎಂ., ಪೃಥ್ವಿ ಮೊದಲಾದವರು ಪಲ್ಸ್ ಪೋಲಿಯೊ ಲಸಿಕೆಯಲ್ಲಿ ಭಾಗವಹಿಸಿದ್ದರು.




