ಬಲಮುರಿ ಜೂ.21: ಮಳೆಗಾಲ ಆರಂಭವಾದರೂ ಕೊಡಗು ಜಿಲ್ಲೆಯಲ್ಲಿ ಆಶಾದಾಯಕ ಮಳೆಯಾಗದ ಹಿನ್ನೆಲೆಯಲ್ಲಿ, ನಾಡಿಗೆ ಉತ್ತಮ ಮಳೆಯಾಗಿ ಜನರ ಜೀವನ ಸಮೃದ್ಧಗೊಳ್ಳಲಿ ಎಂದು ಪ್ರಾರ್ಥಿಸಿ ನಿನ್ನೆ ದಿನ ಶನಿವಾರದಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ನಾಪೋಕ್ಲು ಹೋಬಳಿಯ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ವಿಶೇಷ ‘ಪರ್ಜನ್ಯ ಜಪ-ಪೂಜೆ’ಯನ್ನು ನೆರವೇರಿಸಲಾಯಿತು.

ದೇವಾಲಯದ ಪುರೋಹಿತರಾದ ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನದಿ ಪೂಜೆ, ವೃಕ್ಷ ಪೂಜೆ, ಗೋಪೂಜೆ, ಶ್ರೀ ಅಗಸ್ತ್ಯೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಪರ್ಜನ್ಯ ಜಪ ಹಾಗೂ ವಿಶೇಷ ಅಲಂಕಾರ ಪೂಜೆಗಳೊಂದಿಗೆ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪರ್ಜನ್ಯ ಜಪದ ಮಹತ್ವವನ್ನು ವಿವರಿಸಿದ ಪುರೋಹಿತರು, ನದಿಯಿಂದ ನೀರನ್ನು ತಂದು ಶಿವಾಲಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಆ ಜಲ ನಿರಂತರವಾಗಿ ಹರಿದು ಮತ್ತೆ ನದಿಯನ್ನು ಸೇರುವಾಗ ನಿರಂತರವಾಗಿ ರುದ್ರಪಠಣ ನಡೆಯಬೇಕು; ಈ ಹಿಂದೆ ಇಂತಹ ಪೂಜೆಗಳಿಂದ ಮಳೆಯಾದ ದೃಷ್ಟಾಂತಗಳಿದ್ದು, ನಾಡಿನಲ್ಲಿ ಮಳೆಯಾಗುವವರೆಗೆ ಎಲ್ಲಾ ದೇವಾಲಯಗಳಲ್ಲಿಯೂ ಪರ್ಜನ್ಯ ಜಪ ನಡೆಯಬೇಕು ಎಂದು ಆಶಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಕರ್ತರು, ದುರ್ಗಾ ವಾಹಿನಿ, ಮಾತೃಮಂಡಳಿ, ಬಜರಂಗದಳದ ಸದಸ್ಯರು, ಬಲಮುರಿಯ ಗ್ರಾಮಸ್ಥರು, ಊರಿನ ತಕ್ಕ ಮುಖ್ಯಸ್ಥರು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಪಾಲ್ಗೊಂಡು ಪ್ರಾರ್ಥಿಸಿದರು.
ವರದಿ : ಪ್ರಶಾಂತ್ ಮುತ್ತಣ್ಣ ಕೋಳಿಮಾಡು, ಬಲಮುರಿ




