
ಕೂಡಿಗೆ: ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ದೇಶಭಕ್ತಿಯ ಮನೋಭಾವವನ್ನು ಉತ್ತೇಜಿಸುವ ನಿಮಿತ್ತ ಸೈನಿಕ ಶಾಲೆ ಕೊಡಗಿನಲ್ಲಿ 2025-26ನೇ ಸಾಲಿನ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ಅಂತರಶಾಲಾ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ಜರುಗಿತು. ಸಾಂಸ್ಕೃತಿಕ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಸೈನಿಕ ಶಾಲೆ ಕೊಡಗಿನ, ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ರವರು ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿ ಕಾರ್ಯಕ್ರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶ್ರೀಮತಿ ದಿವ್ಯಾ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಹಾಗೂ ಉಪಪ್ರಾಂಶುಪಾಲರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಹಾಗೂ ವಿವಿಧ ಶಾಲೆಗಳ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಪ್ರಸ್ತುತ ಸ್ಪರ್ಧೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳು ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮನಮೋಹಕ ಜನಪದ ನೃತ್ಯ ಹಾಗೂ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮಕ್ಕೆ ಏಕತೆ ಮತ್ತು ರಾಷ್ಟ್ರಭಕ್ತಿಯ ಭಾವನೆಯನ್ನು ತುಂಬುವ ಉದ್ದೇಶದಿಂದ ಎಲ್ಲಾ ತಂಡಗಳು ಒಟ್ಟಾಗಿ ಒಂದು ಕನ್ನಡ ದೇಶಭಕ್ತಿ ಗೀತೆಯನ್ನು ಹಾಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಸೈನಿಕ ಶಾಲೆ ಕೊಡಗಿನ ಅರನೇ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳು ಅನಾವರಣಗೊಳಿಸಿದ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಕಲಿಕಾ ಅನುಭವವನ್ನು ಹೊಂದಿದ್ದು, ನೃತ್ಯಗಾರರ ಬಣ್ಣಬಣ್ಣದ ಉಡುಪುಗಳು, ಲಯಬದ್ಧ ಚಲನೆಗಳು ಹಾಗೂ ನೈಜ ಅಭಿನಯಗಳು ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾದವು.
ಸ್ಪರ್ಧೆಯ ಅಂತ್ಯದಲ್ಲಿ ಸೈನಿಕ ಶಾಲೆ ಕೊಡಗು ತನ್ನ ಉತ್ಸಾಹಭರಿತ ಮತ್ತು ಶಿಸ್ತಿನ ಪ್ರದರ್ಶನದಲ್ಲಿ ಸಮೂಹ ಜಾನಪದ ನೃತ್ಯ ವಿಭಾಗದ ಪಟ್ಟದ ಕುಣಿತ ಪ್ರದರ್ಶನಕ್ಕಾಗಿ ಪ್ರಥಮ ಸ್ಥಾನ ಪಡೆದುಕೊಂಡಿತು. ಹಾಗೆಯೇ ಗುಂಪು ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಶಾಲೆ ಪ್ರಥಮ ಸ್ಥಾನವನ್ನು ಗಳಿಸಿತು. ಒಟ್ಟಾರೆ ಎರಡೂ ವಿಭಾಗಗಳಲ್ಲಿ ಮನೋಜ್ಞವಾಗಿ ಸಾಧನೆಗೈದ ಸೈನಿಕ ಶಾಲೆ ಕೊಡಗು ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು
ಶಾಲೆ-ಶಾಲೆಗಳ ನಡುವಿನ ಸ್ನೇಹಬಾಂಧವ್ಯವನ್ನು ಬೆಳೆಸುವ, ಈ ಕಾರ್ಯಕ್ರಮವು ಕಲೆಗಳ ಸೌಂದರ್ಯವನ್ನು ಹೆಚ್ಚಿಸುವ ಹಾಗೂ ಯುವ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಮೌಲ್ಯಗಳನ್ನು ಬಲಪಡಿಸುವ ಅರ್ಥಪೂರ್ಣ ವೇದಿಕೆಯಾಗಿ ರೂಪುಗೊಂಡಿತು.





