
ಗುಡ್ಡೆಹೊಸೂರು ಏ.16: ಕೊಡಗು ಪತ್ರಕರ್ತರ ಸಂಘ(ರಿ)ಇದರ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಕೊಡಮಾಡುವ 2026 ನೇ ಸಾಲಿನ ‘ನೇಗಿಲ ಯೋಗಿ’ ಪ್ರಶಸ್ತಿಗೆ ಕುಶಾಲನಗರ ತಾಲೂಕಿನ ಬಾಳುಗೋಡುವಿನ ಸಮಗ್ರ ಕೃಷಿಕರಾದ ನಂಗಾರು ಜಗ ಆಯ್ಕೆಯಾಗಿದ್ದಾರೆ.
ಇತ್ತೀಚಿನ ದಿನಮಾನದ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ, ಬೆಳೆದ ಬೆಳೆಗೆ ಸಿಗದ ಸೂಕ್ತ ಬೆಲೆ ಮುಂತಾದ ಸಂಕಷ್ಟ ಹಾಗೂ ನಷ್ಟದ ಆಯಾಮಗಳನ್ನು ಗಮನದಲ್ಲಿರಿಸಿಕೊಂಡು ಕೇವಲ ಒಂದು ಬೆಳೆಯನ್ನೇ (ಏಕಬೆಳೆ ಪದ್ಧತಿ) ಅವಲಂಬಿಸದೆ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಉತ್ತಮ ಲಾಭಗಳಿಸುತ್ತಿರುವ ನಂಗಾರು ಜಗ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಮೂರು ಎಕರೆ ಸಣ್ಣ ಹಿಡುವಳಿ ಜಮೀನನ್ನು ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡಿರುವ ನಂಗಾರು ಜಗ ಅವರು ತಮ್ಮ ಜಮೀನಲ್ಲಿ ಕೃಷಿ ಹೊಂಡ ನಿರ್ಮಿಸಿ ಮೀನು ಸಾಕಣೆ ಮಾಡುತ್ತಿದ್ದು, ಜೊತೆಗೆ ಅಡಿಕೆ , ಕಾಪಿ, ಏಲಕ್ಕಿ, ಒಳ್ಳೆಮೆಣಸು ಹಾಗೂ ಹಲವಾರು ಸಾಂಬಾರು ಪದಾರ್ಥದ ಗಿಡಗಳನ್ನು ಬೆಳೆದಿದ್ದಾರೆ , ಉತ್ತಮ ಇಳುವರಿ ಪಡೆಯುವ ನಿಟ್ಟಿನಲ್ಲಿ ಕೃಷಿ ಬೆಳೆಗೆ ಪರಾಗ ಸ್ಪರ್ಶದ ಮಹತ್ವವನ್ನು ಅರಿತಿರುವ ಜಗ ಅವರು ಜೇನು ಸಾಕಣೆಯನ್ನು ಉಪ ಕಸುಬಾಗಿ ಮಾಡುತ್ತಿದ್ದು , ಸುಮಾರು 50ಕ್ಕು ಹೆಚ್ಚು ಜೇನು ಕುಟುಂಬವನ್ನು ಪೆಟ್ಟಿಗೆಯಲ್ಲಿ ಸಾಕುತ್ತಿದ್ದಾರೆ, ಪ್ರವಾಸಿ ಸ್ಥಳ ದುಬಾರೆ ಆನೆ ಶಿಬಿರ ಸಮೀಪದಲ್ಲಿರುವುದರಿಂದ ತಮ್ಮ ಜಮೀನಿನ ಬದಿಯಲ್ಲಿ ಕಾಫೀ ಶಾಪ್ ತೆರೆದಿದ್ದು ಅಲ್ಲಿಗೆ ಬೇಟಿ ನೀಡುವ ಪ್ರವಾಸಿಗರಿಗೆ ತಾವೇ ಉತ್ಪಾದನೆ ಮಾಡುತ್ತಿರುವ ಪರಿಶುದ್ಧ ಜೇನು ಮಾರಾಟ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಹಾಗೆಯೇ ವರ್ಷದ ಎಲ್ಲಾ ಋತುವಿನಲ್ಲು ಒಂದಲ್ಲಾ ಒಂದು ಬೆಳೆ ಮಾರಾಟಕ್ಕೆ ಸಿದ್ಧವಾಗಿ ನಿರಂತರ ಆದಾಯ ಗಳಿಸುತ್ತದ್ದಾರೆ. ಜೊತೆಗೆ ಕೆಲವು ಸ್ಥಳೀಯ ಕಾರ್ಮಿಕರಿಗೆ ತಮ್ಮ ತೋಟದಲ್ಲಿ ಕೆಲಸ ನೀಡುತ್ತಿರುವುದು ಸಂತಸ ತಂದಿದೆ ಎಂದು ನೇಗಿಲಯೋಗಿ’ ಪ್ರಶಸ್ತಿಗೆ ಭಾಜನರಾಗಿರುವ ಅವರು ಹರ್ಷ ವ್ಯಕ್ತಪಡಿಸಿದರು
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಲ್ವರು ಕೃಷಿಕರನ್ನು ಕೊಡಗು ಪತ್ರಕರ್ತರ ಸಂಘ(ರಿ)ದ ತಾಲೂಕು ಪತ್ರಕರ್ತರ ಸಂಘವು ಪ್ರತೀ ವರ್ಷ ‘ನೇಗಿಲಯೋಗಿ’ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅದರಂತೆ ಈ ಬಾರಿ ಸುಂಟಿಕೊಪ್ಪದ ಪ್ರಗತಿಪರ ಕೃಷಿಕ ಪಟ್ಟೆಮನೆ ಪಿ.ಉದಯಕುಮಾರ್, ನಾಕೂರು ಶಿರಂಗಾಲ ಗ್ರಾಮ ಪಂಚಾಯತ್’ನ ಮಳೂರು ನಿವಾಸಿ ಶಂಕರನಾರಾಯಣ, ಶಿರಂಗಾಲ ಗ್ರಾಮ ಪಂಚಾಯತ್’ನ ಮಣಜೂರು ನಿವಾಸಿ ಭವಾನಿ ಕುಮಾರಸ್ವಾಮಿ ಅವರುಗಳು ಪ್ರಶಸ್ತಿಗೆ ಭಾಜನರಾಗಿದ್ದಾರೆ .ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಬಿ.ಸಿ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ‘ನೇಗಿಲಯೋಗಿ’ ಪ್ರಶಸ್ತಿ ಪ್ರಧಾನ ಸಮಾರಂಭ ಏ.21 ರಂದು ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.





