ಬೆಂಗಳೂರು/ಮಡಿಕೇರಿ ಜೂ.11: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರವು ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ.
ಸಮಾಜಘಾತುಕ ಶಕ್ತಿಗಳು ಮತ್ತು ಸರಣಿ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಹಾಗೂ ಪೊಲೀಸ್ ಕಮಿಷನರ್ಗಳಿಗೆ ‘ಗೂಂಡಾ ಕಾಯ್ದೆ’ ಅಡಿಯಲ್ಲಿ ವಿಶೇಷ ಅಧಿಕಾರವನ್ನು ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಗೃಹ ಇಲಾಖೆಯ (ಕಾನೂನು ಮತ್ತು ಸುವ್ಯವಸ್ಥೆ) ಅಧೀನ ಕಾರ್ಯದರ್ಶಿ ನಾಗರಾಜು ಎಸ್. ಅವರು ರಾಜ್ಯಪಾಲರ ಹೆಸರಿನಲ್ಲಿ ಹೊರಡಿಸಿರುವ ಈ ಆದೇಶವು, 2026ರ ಜೂನ್ 10 ರಿಂದ ಸೆಪ್ಟೆಂಬರ್ 9 ರವರೆಗೆ ಒಟ್ಟು ಮೂರು ತಿಂಗಳ ಅವಧಿಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.
ಈ ಅವಧಿಯಲ್ಲಿ ಆಯಾ ವ್ಯಾಪ್ತಿಯ ಉನ್ನತ ಅಧಿಕಾರಿಗಳು ಅಪರಾಧ ಚಟುವಟಿಕೆಗಳ ಮೇಲೆ ಕಣ್ಣಿಡಲು ಮತ್ತು ಶಾಂತಿ ಭಂಗ ತರುವವರ ವಿರುದ್ಧ ತಕ್ಷಣದ ಕಾನೂನು ಕ್ರಮ ಜರುಗಿಸಲು ಸಂಪೂರ್ಣ ಸ್ವಾಯತ್ತತೆ ಹೊಂದಿರುತ್ತಾರೆ ಎಂದು ಸುತ್ತೋಲೆಯಲ್ಲಿ ತಿಳಿಯಪಡಿಸಲಾಗಿದೆ .
ಈ ವಿಶೇಷ ಆದೇಶದ ಅನ್ವಯ, ಸಮಾಜದಲ್ಲಿ ನಿರಂತರವಾಗಿ ಅಪರಾಧ ಎಸಗುವ ಕಳ್ಳಭಟ್ಟಿ ದಂಧೆಕೋರರು, ಮಾದಕವಸ್ತು (ಡ್ರಗ್ಸ್) ವ್ಯಾಪಾರಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಮಾನವ ಸಾಗಾಣಿಕೆದಾರರು, ಸ್ಲಂ-ಕಬಳಿಕೆದಾರರು ಹಾಗೂ ಆಡಿಯೋ-ವಿಡಿಯೋ ಪೈರಸಿ ದಂಧೆಯಲ್ಲಿ ತೊಡಗಿರುವವರನ್ನು ವಾರಂಟ್ ಇಲ್ಲದೆಯೇ ‘ಮುಂಜಾಗ್ರತಾ ಬಂಧನ’ (Preventive Detention) ಕ್ಕೆ ಒಳಪಡಿಸಲು ಅಧಿಕಾರಿಗಳಿಗೆ ಈ ವಿಶೇಷಕ ಅಧಿಕಾರ ನೀಡಲಾಗಿದೆ.




