ಸೋಮವಾರಪೇಟೆ ಜೂ.9: ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ರಚಿಸಲಾಗಿರುವ ‘ಮಾರುಕಟ್ಟೆ ನಿರ್ವಹಣೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಮಂಡ್ಯ ಭಾರತಿ ನಗರದಲ್ಲಿರುವ ಭಾರತಿ ವಿದ್ಯಾಸಂಸ್ಥೆಯ ಆವರಣದಲ್ಲಿ ಜರುಗಿತು.
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಂಡ್ಯದ ಮಾಜಿ ಸಂಸದರಾದ ದಿವಂಗತ ಜಿ. ಮಾದೇಗೌಡ ಅವರ ಪುತ್ರರರು, ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮಧು ಜಿ. ಮಾದೇಗೌಡ ಅವರ ಅಧ್ಯಕ್ಷತೆಯಲ್ಲಿ ‘ಮಾರುಕಟ್ಟೆ ನಿರ್ವಹಣೆ’ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಅತ್ಯುಪಯುಕ್ತ ಪುಸ್ತಕವನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸಂತ ಜೋಸಫರ ಪದವಿ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚಂದ್ರಶೇಖರ ಮೂರ್ತಿ (M.Com, M.Phil, B.Ed, KSET) ಹಾಗೂ ಮಂಡ್ಯ ಜಿಲ್ಲೆಯ ಭಾರತೀನಗರದ ಭಾರತಿ ವಿದ್ಯಾಸಂಸ್ಥೆಯ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣೇಶ್ ಕೆ. ಟಿ (M.Com, Ph.D, NET) ಅವರು ಜಂಟಿಯಾಗಿ ರಚಿಸಿದ್ದಾರೆ.
ಸಹ-ಲೇಖಕರಾದ ಡಾ. ಗಣೇಶ್ ಕೆ. ಟಿ ಅವರ ಅಚ್ಚುಕಟ್ಟಾದ ಆಯೋಜನೆಯಲ್ಲಿ ನಡೆದ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭದಲ್ಲಿ ಭಾರತಿ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗದವರು, ಸಹೋದ್ಯೋಗಿಗಳು ಹಾಗೂ ಲೇಖಕರ ಆತ್ಮೀಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರದ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯ ಸೂಕ್ಷ್ಮಗಳನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಈ ಕೃತಿ ಅತ್ಯಂತ ಸಹಕಾರಿಯಾಗಿದ್ದು, ಗ್ರಾಮೀಣ ಭಾಗದ ಇಬ್ಬರು ಪ್ರತಿಭಾವಂತ ಪ್ರಾಧ್ಯಾಪಕರ ಈ ಶೈಕ್ಷಣಿಕ ಪ್ರಯತ್ನಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಸಹೋದ್ಯೋಗಿಗಳು ಶ್ಲಾಘನೆ ವ್ಯಕ್ತಪಡಿಸಿದರು.




