ಗಣೇಶೋತ್ಸವ ಸಂಭ್ರಮಕ್ಕೆ ಪೊಲೀಸರ ಸಹಕಾರ: ನಿಯಮಪಾಲನೆಯೊಂದಿಗೆ ಹಬ್ಬ ಆಚರಿಸಲು ಎಸ್ಪಿ ಬಿಂದುಮಣಿ ಕರೆ


ಕುಶಾಲನಗರ 09: ನಾಡಿನಾದ್ಯಂತ ಸಂಭ್ರಮ-ಸದಭಿರುಚಿಯಿಂದ ಆಚರಿಸಲ್ಪಡುವ ಗಣೇಶೋತ್ಸವವನ್ನು ಈ ಬಾರಿಯೂ ಅತ್ಯಂತ ಶಾಂತಿಯುತ, ಶಿಸ್ತುಬದ್ಧ ಹಾಗೂ ಪರಿಸರಸ್ನೇಹಿಯಾಗಿ ಆಚರಿಸಲು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.
ಕುಶಾಲನಗರ ರೈತ ಭವನ ಸಭಾಂಗಣದಲ್ಲಿ ಸೋಮವಾರಪೇಟೆ ಉಪವಿಭಾಗವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಣೇಶೋತ್ಸವ ಸಮಿತಿಗಳ ಸೌಹಾರ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಬ್ಬದ ಸಂಭ್ರಮಕ್ಕೆ ಯಾವುದೇ ಭಂಗ ಬರದಂತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಅಗತ್ಯ ಎಂದರು.
ಸ್ಥಳೀಯ ಠಾಣೆ ಹಾಗೂ ತಾಲ್ಲೂಕು ಆಡಳಿತದ ಸಕಾಲಿಕ ಅನುಮತಿ ಪಡೆದು ಮೂರ್ತಿ ಪ್ರತಿಷ್ಠಾಪನೆ ಮಾಡುವುದರಿಂದ ಉತ್ಸವದ ಸಮಯದಲ್ಲಿ ಇಲಾಖೆಯಿಂದ ಅಗತ್ಯ ರಕ್ಷಣೆ ಮತ್ತು ಸಹಾಯ ಸಿಗಲಿದೆ.
ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಿ, ಹಿರಿಯರು ಹಾಗೂ ವಿದ್ಯಾರ್ಥಿಗಳ ನೆಮ್ಮದಿಗೆ ಸಹಕರಿಸಬೇಕು ಹಾಗೂ ಬೃಹತ್ ಡಿಜೆಗಳ ಬದಲು ಪಾರಂಪರಿಕ ಮಂಗಳವಾದ್ಯಗಳಿಗೆ ಆದ್ಯತೆ ನೀಡುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಹಾಗೂ ವಿದ್ಯುತ್ ಸಂಪರ್ಕಗಳಲ್ಲಿ ಸುರಕ್ಷತೆ ವಹಿಸಬೇಕು ಮತ್ತು ಮೆರವಣಿಗೆಯಲ್ಲಿ ಪ್ರೀತಿ-ಸೌಹಾರ್ದತೆಯನ್ನು ಎತ್ತಿಹಿಡಿಯಬೇಕು ಎಂದು ಅವರು ಕೋರಿದರು. ಭದ್ರತೆ ಮತ್ತು ಸುರಕ್ಷತೆಗಾಗಿ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ವ ಸನ್ನದ್ಧರಾಗಿದ್ದು, ಸಾರ್ವಜನಿಕರ ಸಹಕಾರದಿಂದ ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಚರಿಸೋಣ ಎಂದು ಎಸ್ಪಿ ಅವರು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ಗಳು, ಪಿಎಸ್ಐಗಳು ಹಾಗೂ ಸಾರ್ವಜನಿಕ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



