ವಿರಾಜಪೇಟೆ ಆ.06: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ವಿರಾಜಪೇಟೆ ತಾಲೂಕಿನ ಕೃಷಿ ಕಾರ್ಯಕ್ರಮದಡಿ, ಕುಂದ ಕಾರ್ಯಕ್ಷೇತ್ರದ ಪ್ರಗತಿಪರ ಕೃಷಿಕರಾದ ಮೋಹನ್ ಟಿ ಅವರ ಗದ್ದೆಯಲ್ಲಿ ಯಾಂತ್ರಿಕೃತ ಗದ್ದೆ ನಾಟಿಯ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾನ್ಯ ಸಂಸ್ಥೆಯ ಕೊಡಗು ಜಿಲ್ಲಾ ನಿರ್ದೇಶಕರಾದ ವಿಠ್ಠಲ್ ಸಾಲಿಯಾನ್ ಅವರು ಯಂತ್ರದ ಮೂಲಕ ನಡೆಯುತ್ತಿದ್ದ ಭತ್ತ ನಾಟಿ ಕಾರ್ಯವನ್ನು ವೀಕ್ಷಿಸಿ, ರೈತರಿಗೆ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಯಾಂತ್ರಿಕೃತ ನಾಟಿ ಪದ್ಧತಿಯಿಂದ ಸಮಯ, ಶ್ರಮ ಮತ್ತು ವೆಚ್ಚ ಉಳಿತಾಯವಾಗುವುದಲ್ಲದೆ, ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಇದು ಸಹಕಾರಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಟಿ ಯಂತ್ರದ ಚಾಲಕ ಲಕ್ಷ್ಮಣ್, ಕೃಷಿ ಮೇಲ್ವಿಚಾರಕರಾದ ವಸಂತ್ ಹಾಗೂ ಸ್ಥಳೀಯ ರೈತರು ಉಪಸ್ಥಿತರಿದ್ದರು.




