ಕುಶಾಲನಗರ, ಮಾ.5: ಗುಡ್ಡೆಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ದೀರ್ಘಕಾಲದಿಂದ ಸ್ಮಶಾನ ಭೂಮಿ ಮತ್ತು ಅರಣ್ಯ ಇಲಾಖೆಯ ನಡುವೆ ಉಂಟಾಗಿದ್ದ ಗಡಿ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಗುಡ್ಡೆಹೊಸೂರು ಗ್ರಾಮ ಪಂಚಾಯತ್ , ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ವೈಜ್ಞಾನಿಕವಾಗಿ ಗಡಿ ಗುರುತಿಸಿದ್ದಾರೆ.
ಚಿಕ್ಕಬೆಟ್ಟಗೇರಿ ಗ್ರಾಮದ ಸರ್ವೆ ನಂಬರ್ 1/1 ರಲ್ಲಿ ಸುಮಾರು 0.13 ಸೆಂಟ್ ವಿಸ್ತೀರ್ಣದ ಜಾಗವನ್ನು ಸರ್ಕಾರವು ಈ ಹಿಂದೆ ಸ್ಮಶಾನಕ್ಕಾಗಿ ಮಂಜೂರು ಮಾಡಿತ್ತು. ಆದರೆ ಈ ಜಾಗವು ಅರಣ್ಯ ಭೂಮಿಗೆ ಹೊಂದಿಕೊಂಡಿರುವುದರಿಂದ, ನಿಖರವಾದ ಗಡಿ ಗುರುತಿಸುವಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದರಿಂದಾಗಿ ಗ್ರಾಮಸ್ಥರು ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಆಕ್ಷೇಪಣೆ ಅಥವಾ ಜಾಗದ ಕೊರತೆಯ ಭೀತಿಯಿಂದ ಅಡಚಣೆಗಳನ್ನು ಅನುಭವಿಸುತ್ತಿದ್ದರು.
ಈ ಗೊಂದಲವನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸರ್ವೆ ನಡೆಸಿದರು. ಸರ್ಕಾರದ ಅಧಿಕೃತ ದಾಖಲೆಗಳನ್ವಯ ಸ್ಮಶಾನಕ್ಕೆ ಮೀಸಲಿಟ್ಟ 0.13 ಸೆಂಟ್ ಜಾಗವನ್ನು ಅಳತೆ ಮಾಡಿ, ಅರಣ್ಯ ಭೂಮಿಯಿಂದ ಪ್ರತ್ಯೇಕಿಸಿಲಾಗಿದೆ ಈ ಮೂಲಕ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಸ್ಮಶಾನ ಭೂಮಿಯ ಹಕ್ಕನ್ನು ಸ್ಪಷ್ಟಪಡಿಸಲಾಗಿದೆ.
ಸರ್ವೆ ಕಾರ್ಯದ ಸಂದರ್ಭ ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಸುಮೇಶ್ ಎಮ್ ಆರ್, ಗ್ರಾಮ ಆಡಳಿತ ಅಧಿಕಾರಿಗಳಾದ ಸಂತೋಷ್ ಮತ್ತು ಸೋನು, ಸರ್ವೆ ಇಲಾಖೆಯ ಅಧಿಕಾರಿ ರವಿ, ಅರಣ್ಯ ಇಲಾಖೆಯ ಅಧಿಕಾರಿ ದೇವಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ರವಿ, ಗುಡ್ಡೆಹೊಸೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಮಾರಸ್ವಾಮಿ, ಪಂಚಾಯತ್ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು




