
ಪೊನ್ನಂಪೇಟೆ ಜ.11: ಈಚೂರು ಕುಂದ ಗ್ರಾಮದಲ್ಲಿ ಟಾರ್ ಘಟಕದಿಂದ ಉಂಟಾಗಿರುವ ಪರಿಸರ ಹಾಗೂ ಆರೋಗ್ಯ ಸಮಸ್ಯೆಗಳ ಕುರಿತು ಅಲ್ಲಿನ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳ ಮೂಲಕ ನೆನ್ನೆ ಜನವರಿ 10 ರಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಟಾರ್ ಘಟಕದ ವಿರುದ್ಧ ಸಾಮಾಜಿಕ ಜಾಲತಾಣದ ಪ್ರಚಾರಕ್ಕೆ ತುರ್ತಾಗಿ ಸ್ಪಂದನೆ ನೀಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಎಸ್ ಪೊನ್ನಣ್ಣನವರು ಪೊನ್ನಂಪೇಟೆ ತಾಲೂಕಿನ ಈಚೂರು ಕುಂದಕ್ಕೆ ಇಂದು ಸಂಜೆ ಭೇಟಿ ನೀಡಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಬಹಳ ತಾಳ್ಮೆಯಿಂದ ಆಲಿಸಿದ ಶಾಸಕರು ವಿಷಯದ ಕುರಿತು ಸಮಗ್ರ ತನಿಖೆ ನಡೆಸಿ ಕಾನೂನಿನ ಅಡಿಯಲ್ಲಿ ಗ್ರಾಮಸ್ಥರಿಗೆ ಉಪಕಾರವಾಗುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜನರ ಸಾಮಾನ್ಯ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಸ್ಪಷ್ಟ ನಿಲುವು ತೋರಿದ ಶಾಸಕರ ನಡೆಗೆ ನೆರೆದಿದ್ದ ಗ್ರಾಮಸ್ಥರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.




