ಮೂರ್ನಾಡು ಜ.2 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ವಿರಾಜಪೇಟೆ ತಾಲೂಕು ಮೂರ್ನಾಡು ವಲಯದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಡಿಯಲ್ಲಿ ಕೃಷಿ ನೀರಾವರಿ ಮಾಹಿತಿ ಕಾರ್ಯಕ್ರಮವನ್ನುಪಾರಣೆ ಗ್ರಾಮ ಪಂಚಾಯಿತಿಯ ಬಲಮುರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಪ್ರಗತಿಪರ ಕೃಷಿಕರಾದ ಪ್ರಶಾಂತ್ ಮುತ್ತಣ್ಣ ರವರು ಭಾಗವಹಿಸಿ ಮಾಹಿತಿ ನೀಡಿದರು. ಕೃಷಿ ನೀರಾವರಿ ಹಾಗು ಕೃಷಿಯಲ್ಲಿ ಮಣ್ಣಿನ ಪಾತ್ರ ಇದರ ಬಗ್ಗೆ ಮಾತನಾಡಿದ ಅವರು ‘ಭಾರತದ ಕೃಷಿ ಮಳೆಯೊಡನೆ ಆಡುವ ಜೋಜಾಟ’ ಎಂಬುದನ್ನು ಉಲ್ಲೆಖಿಸಿ ಕೃಷಿಯಲ್ಲಿ ಮಳೆಯ ಪ್ರಾಮುಖ್ಯತೆಯನ್ನು ವಿವರಿಸುತ್ತ, ಮಳೆನೀರಿನ ಸಮರ್ಪಕ ಬಳಕೆ, ಮಳೆ ನೀರಿನ ಸಂಗ್ರಹಣೆ ಯಲ್ಲಿ ಕೃಷಿ ಹೊಂಡಗಳ ಪಾತ್ರ, ತೋಟ ಹಾಗು ಗದ್ದೆಯ ಬದಿಗಳಲ್ಲಿ ಚರಂಡಿಗೆ ನಿರ್ಮಾಣದ ಪ್ರಾಮುಖ್ಯತೆ, ನೀರು ಇಂಗಿಸುವುದರ ಪ್ರಯೋಜನ ಗಳನ್ನು ವಿವರಿಸಿದರು. ಕೊಳವೆ ಬಾವಿಗಳಿಗೆ ಜಲ ಪೂರಣ ಮಾಡುವುದರ ಮೂಲಕ ಅಂತರ್ಜಲವನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು .
ಮಣ್ಣಿನ ಅರೋಗ್ಯವನ್ನು ಕಾಪಾಡಿಕೊಳ್ಳಲು ರಾಸಾಯಿನಿಕ ಮುಕ್ತ ಕೃಷಿ ಮಾಡಬೇಕು, ಬದಿಗಳಲ್ಲಿ ನುಗ್ಗೆ, ಅಗಸೆಯಂತ ಗಿಡ ಮರಗಳನ್ನು ನೆಟ್ಟು ಮಣ್ಣಿನ ಸವಕಳಿಯನ್ನು ತಪ್ಪಿಸುವುದರ ಜೊತೆಗೆ ಇದರಿಂದ ದಿನ ನಿತ್ಯದ ಬಳಕೆಗೆ ಸೊಪ್ಪಿನ ಬಳಕೆ ಮಾಡಬಹುದು ಎಂದು ತಿಳಿಸಿದರು. ಸರ್ಕಾರವು ವಿವಿಧ ಇಲಾಖೆ ಗಳ ಮೂಲಕ ಜಲ ಸಂರಕ್ಷಣೆಗೆ, ಮಣ್ಣಿನ ರಕ್ಷಣೆಗೆ ಸಂಬಂದಿಸಿದ ಸಾಕಷ್ಟು ಅನುದಾನಗಳನ್ನು ಕೊಡುತ್ತಿದೆ, ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮಣ್ಣು ಹಾಗು ನೀರಿನ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ವಿವರಿಸಿದರು. ಕೃಷಿ ಮೇಲ್ವಿಚಾರಕ ವಸಂತ್ ಒಕ್ಕೂಟದ ಪದಾಧಿಕಾರಿ ಬಿಂದು ಸೇವಾ ಪ್ರತಿನಿಧಿ ಸಾವಿತ್ರಿ ಕೃಷಿ ಸಖಿ ದಿವ್ಯ ಸಂಘದ ಸದಸ್ಯರು ಪ್ರಗತಿಪರ ಕೃಷಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು





