
2025ನೇ ಸಾಲಿನ ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ಪರಿಶೀಲನಾ ಸಮಿತಿ ಶಿಫಾರಸು ಮಾಡಿದ ವಿಧೇಯಕವನ್ನು ಬೆಳಗಾವಿಯ ಅಧಿವೇಶನದಲ್ಲಿ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ರವರು ಮಂಡಿಸಿದರು.
ಭೂ ಪರಿವರ್ತನೆಯನ್ನು ಸರಳೀಕರಿಸಲು, ನಕಲಿ ದಾಖಲೆಗಳ ತಡೆಗಟ್ಟಲು ಮತ್ತು ಜಮ್ಮಾ ಬಾಣೆ ಭೂಮಿಗಳ ಹಕ್ಕುಗಳನ್ನು ಖಚಿತಪಡಿಸುವ ಕುರಿತಾದ ಪ್ರಮುಖ ತಿದ್ದುಪಡಿಗಳಂತಹ ಅನೇಕ ವಿಷಯಗಳನ್ನು ಒಳಗೊಂಡ ಈ ವಿಧೇಯಕ ಕೊಡಗು ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಪಟ್ಟೆದಾರರ ಹೆಸರನ್ನು ಪಹಣಿಯಲ್ಲಿ ನಮೂದಿಸಿರುವ ಸಮಸ್ಯೆಗೆ ಕೂಡ ಅನುಕೂಲವಾಗಲಿದೆ .
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ. ಎಸ್. ಪೊನ್ನಣ್ಣ ಅವರು ತಿದ್ದುಪಡಿ ವಿಧೇಯಕದ ಕುರಿತು ಮಾತನಾಡಿ,ಈ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಹಾಗೂ ಕೊಡಗಿನ ಬಹಳಷ್ಟು ವರ್ಷಗಳ ಅತ್ಯಂತ ಜಟಿಲವಾದ ಸಮಸ್ಯೆ ಇದರಿಂದ ಪರಿಹಾರವಾಗಲಿದ್ದು,ಕೊಡಗಿನ ಜನತೆಗೆ ಅನುಕೂಲವಾಗಲಿದೆ. ಕಂದಾಯ ಸಚಿವರ ಇಚ್ಚಾ ಶಕ್ತಿ ಕಾಳಜಿಯಿಂದ ಈ ಕಾಯ್ದೆ ಜಾರಿಯಾಗಿದೆ. ಕೊಡಗಿನ ಜನತೆಯ ಪರವಾಗಿ ಸಚಿವರಿಗೆ ಹಾಗೂ ಪರಿಶೀಲನಾ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿ ಈ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು ವಿಧೇಯಕದ ಕುರಿತು ಪ್ರಸ್ತಾಪಿಸಿ ಇದು ಸ್ವಾಗತ ಮಾಡುವಂತ ತಿದ್ದುಪಡಿ ಆಗಿದ್ದು,ನಾನು ಕಂದಾಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಹಳ ಪ್ರಯತ್ನ ಮಾಡಿದ್ದೇನೆ, ಏಕೆಂದರೆ ಕೂರ್ಗ್ ಲ್ಯಾಂಡ್ ರೆಗುಲೇಶನ್ ಆಕ್ಟ್ 1899 ಪ್ರಾರಂಭವಾಗಿ ಪಟ್ಟೇದಾರರಿಗೆ ಹಕ್ಕು ಸಿಗುತ್ತಿಲ್ಲ . ಪರಿಶೀಲನಾ ಸಮಿತಿ ಸಭೆಯಲ್ಲಿ ಪರಿಶೀಲನೆಯಾಗಿ ಈ ತಿದ್ದುಪಡಿ ಕಾಯ್ದೆ ಬಂದಿದೆ, ಪರಿಹಾರದ ಮಾರ್ಗೋಪಾಯಗಳನ್ನು ಕಾಯ್ದೆಯಲ್ಲಿ ತಿಳಿಸಬೇಕು ಎಂದರು.
ಈ ಕುರಿತು ಸದಸ್ಯರಾದ ಅರಗ ಜ್ಞಾನೇಂದ್ರ ಅವರು ಮಾತನಾಡಿ ಕೊಡಗಿನ ಬಗ್ಗೆ ಅಧ್ಯಯನ ಮಾಡಿ,ಅಧ್ಯಯನದ ವರದಿಯನ್ನು ಓದಿದ್ದೇನೆ. ಜಮ್ಮಬಾಣೆ ಬಹಳ ವರ್ಷದ ಸಮಸ್ಯೆಯಾಗಿದೆ, ಪೊನ್ನಣ್ಣ ಅವರ ಒತ್ತಡದ ಮೇಲೆ ಮತ್ತು ಕೊಡಗು ಜನರ ಒತ್ತಾಯದ ಮೇಲೆ ಮಾಡಿದ್ದೀರಿ,ನಾನು ಬಿಲ್ಲನ್ನು ಸ್ವಾಗತ ಮಾಡುತ್ತೇನೆ ಎಂದರು. ಪರಿಶೀಲನಾ ಸಮಿತಿ ಸದಸ್ಯರಾದ ಶ್ರೀ ಅರವಿಂದ್ ಬೆಲ್ಲದ್ ಅವರು ಮಾತನಾಡಿ ಕೊಡಗು ಜಿಲ್ಲೆಯ ಜನರ ತೊಂದರೆಯನ್ನು ಅನುಭವಿ ಸುತ್ತಿರುವುದನ್ನು ಕೂಲಂಕುಶವಾಗಿ ಸಮಿತಿ ಸಭೆಯಲ್ಲಿ ಚರ್ಚಿಸಿ ಉತ್ತಮವಾದ ಬದಲಾವಣೆ ಯನ್ನು ಈ ಬಿಲ್ ನಲ್ಲಿ ತೆಗೆದುಕೊಂಡು ಬಂದಿದ್ದಾರೆ.ಇದನ್ನು ಸ್ವಾಗತಿಸುತ್ತೇನೆ ಕಾನೂನು ಉದ್ದೇಶ ಒಳ್ಳೆಯದಾಗಿರುತ್ತದೆ. ಪೊನ್ನಣ್ಣ ಅವರು ಹೇಳಿದಂತೆ ಕಾನೂನು ನಿಯಮಾವಳಿಗಳು ರೂಪಿಸುವ ಮೊದಲು ಪರಿಶೀಲನಾ ಸಮಿತಿ ಪರಿಶೀಲಿಸಿದ ನಂತರ ಜಾರಿಗೆ ಬಂದರೆ ಜನರಿಗೆ ಅನುಕೂಲವಾಗುತ್ತದೆ ಎಂದರು.




