ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಬಿ.ಶೆಟ್ಟಿಗೇರಿ ನಿವಾಸಿ ವೈಭವ್ ಎನ್ನುವ ಯುವ ಆಟೋ ಚಾಲಕ, ನರಸಂಬಂಧಿತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಸಹಾಯ ಮಾಡಿದ ವಿರಾಜಪೇಟೆ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರನ್ನು ಚಿಕಿತ್ಸೆ ಬಳಿಕ ಭೇಟಿಯಾಗಿ ಧನ್ಯವಾದ ಅರ್ಪಿಸಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮಾನ್ಯ ಶಾಸಕರು, ಸುಮಾರು ಲಕ್ಷದಲ್ಲಿ ಒಬ್ಬರಿಗೆ ಬರುವಂತಹ ನರರೋಗ ಇದಾಗಿದ್ದು, ಇದರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ 20 ಲಕ್ಷಕ್ಕೂ ಅಧಿಕ ವೆಚ್ಚ ತಗುಲುತ್ತಿತ್ತು. ಸ್ಥಳೀಯ ಮುಖಂಡರಾದ ರವೀಂದ್ರ ಹಾಗೂ ಸಂಜು ರವರ ಮೂಲಕ ತಮಗೆ ಈ ಸಮಸ್ಯೆ ಬಗ್ಗೆ ಮನವರಿಕೆ ಆಗಿದ್ದು ಕೂಡಲೇ ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಯಿತು. ಅಲ್ಲಿನ ವೈದ್ಯರೊಂದಿಗೆ ಮೊದಲೇ ಕರೆ ಮಾಡಿ ಈ ವ್ಯಕ್ತಿಗೆ ಚಿಕಿತ್ಸೆ ಕೊಡಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದೀಗ ಗುಣಮುಖರಾಗುತ್ತಾ ಚೇತರಿಸಿಕೊಳ್ಳುತ್ತಿರುವ ವೈಭವ್ರವರು ಇಂದು ಕೃತಜ್ಞತಾಪೂರ್ವಕವಾಗಿ ತನ್ನನ್ನು ಭೇಟಿಯಾಗಿ ಧನ್ಯವಾದ ಅರ್ಪಿಸಿದರು. ಅವರಿಗೆ ಅತ್ಯಂತ ಶೀಘ್ರ ಗುಣಮುಖರಾಗಿ ಎಂದು ಹಾರೈಸುತ್ತಾ, ನಮ್ಮ ರಾಜ್ಯದ ಅನೇಕ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ನೀಡುತ್ತಿದ್ದು ಅತ್ಯಂತ ಪರಿಣಿತ ವೈದ್ಯರು ಸಹ ಇದ್ದಾರೆ. ಆದ್ದರಿಂದ ಆರೋಗ್ಯ ಸಮಸ್ಯೆ ಇರುವವರು ದುಬಾರಿ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡದೆ ಒಳ್ಳೆಯ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ಸರ್ಕಾರಿ ಆಸ್ಪತ್ರೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮಾನ್ಯ ಶಾಸಕರು ಮನವಿ ಮಾಡಿದರು.




