
ಕೂಡಿಗೆ ಡಿ27: ಸೈನಿಕ ಶಾಲೆ ಕೊಡಗಿನ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಮೊನ್ನೆ ಡಿಸೆಂಬರ್ 25ರಂದು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಯಾಗಿ, ಶಾಲೆಯ ಸಾಧನೆಗಳು ಹಾಗೂ ಗಣನೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು.
2007 ರಿಂದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಪ್ರಖ್ಯಾತ ವಸತಿ ಶಿಕ್ಷಣ ಸಂಸ್ಥೆಯಾದ ಸೈನಿಕ ಶಾಲೆ ಕೊಡಗು ತನ್ನ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿರಂತರವಾಗಿ ಮಹತ್ವದ ಪ್ರಗತಿ ಸಾಧಿಸುತ್ತಿದೆ,
ಸಂಸದರನ್ನು ಬೇಟಿಯಾದ ವೇಳೆ ಪ್ರಾಂಶುಪಾಲರು ಶಾಲೆಯ ಪರಿಣಾಮಕಾರಿ ಕಾರ್ಯನಿರ್ವಹಣೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ ಡಿ ಎ) ಹಾಗೂ ನೌಕಾ ಅಕಾಡೆಮಿ(ಐ ಎನ್ ಎ)ಗೆ ಸೇರ್ಪಡೆಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ಏರಿಕೆ, ಹಾಗೂ ನಾಗರಿಕ ಸೇವೆಗಳನ್ನೂ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಾದ್ಯಂತ ದೇಶಸೇವೆಯಲ್ಲಿ ತೊಡಗಿರುವ ಹಳೆಯ ವಿದ್ಯಾರ್ಥಿಗಳ ಸಾಧನೆಗಳನ್ನು ವಿವರಿಸಿದರು.
ಹಾಗೆಯೇ ಸಿ ಬಿ ಎಸ್ ಸಿ ಬೋರ್ಡ್ ಪರೀಕ್ಷೆಗಳಲ್ಲಿ ಶಾಲೆಯ ನಿರಂತರ ಶೈಕ್ಷಣಿಕ ಸಾಧನೆ ಹಾಗೂ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ತೋರಿದ ಹಿರಿಮೆಯನ್ನು ಕುರಿತು ಮಾಹಿತಿ ಹಂಚಿಕೊಂಡರು.
ಇದರೊಂದಿಗೆ ಶಾಲೆಯ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಮಾನ್ಯ ಸಂಸದರು, ಶಾಲೆಯ ಬೆಳವಣಿಗೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕುರಿತು ಸಂತಸ ವ್ಯಕ್ತಪಡಿಸಿದರು. ಶಾಲೆಯನ್ನು ಇನ್ನಷ್ಟು ಬಲಪಡಿಸಿ, ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಂಪೂರ್ಣ ಬೆಂಬಲ ನೀಡುವುದಾಗಿ ಸಂಸದರು ಈ ಸಂದರ್ಭ ಭರವಸೆ ನೀಡಿದರು.

..




