
ಮಡಿಕೇರಿ ಜ.19: ನಿನ್ನೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ(ರಿ) ದ ಅಂಗ ಸಂಸ್ಥೆಯಾದ ಕೊಡಗು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ “ಸಂಕ್ರಾಂತಿ ಸಂಭ್ರಮ” ಪತ್ರಕರ್ತರಿಗಾಗಿ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಜಿಲ್ಲೆಯ ಅನೇಕ ಗ್ರಾಮೀಣ ಪತ್ರಕರ್ತರ ಹಿತದೃಷ್ಟಿಯ ಸಲುವಾಗಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಹಾಗೂ ತುರ್ತು ವೈದ್ಯಕೀಯ ಸಮಸ್ಯೆಗಳು ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಂಕಷ್ಟ ಎದುರಾದಾಗ ನೆರವು ನೀಡುವ ಸದುದ್ದೇಶದಿಂದ “ಪತ್ರಕರ್ತರ ಕ್ಷೇಮನಿಧಿ” ಗೆ ಹಣ ಕ್ರೋಢೀಕರಣದ ಮೂಲ ಉದ್ದೇಶದೊಂದಿಗೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
“ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘದ ಪತ್ರಕರ್ತರು ನಾಲ್ಕು ತಂಡಗಳಾದ ಸಿರಿ, ಹೊನ್ನು , ಸಮೃದ್ಧಿ, ಹಾಗೂ ಸುಗ್ಗಿ ಯಲ್ಲಿ ತಮ್ಮ ನಿತ್ಯ ದಿನಚರಿಯ ಪೆನ್ನು ಹಾಗೂ ಕ್ಯಾಮರಗಳನ್ನು ಬದಿಗಿಟ್ಟು ಬ್ಯಾಟ್ ಬಾಲುಗಳೊಂದಿಗೆ ಮೈದಾನಕ್ಕೆ ಇಳಿದು ದಿನವಿಡಿ ಆಟವಾಡಿ ಕ್ರೀಡಾ ಸ್ಪೂರ್ತಿ ಮೆರೆದರು. ಕ್ರೀಡಾಕೂಟದ ಅಂತಿಮ ಹಂತ ಫೈನಲ್ ನಲ್ಲಿ ಸುರೇಶ್ ಬಿಳಿಗಿರಿಯವರ ಸುಗ್ಗಿ ತಂಡ ಸಿರಿ ತಂಡವನ್ನು ಮಣಿಸುವುದರ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪತ್ರಕರ್ತರ “ಸಂಕ್ರಾಂತಿ ಸಂಭ್ರಮ” ಕ್ರಿಕೆಟ್ ಕೂಟದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜಿಲ್ಲೆಯ ಕಾರ್ಯಾಂಗದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿವರ್ಗದ ಮಹನೀಯರ ನಡುವಿನ ಸೌಹಾರ್ದ ಪಂದ್ಯಾಟವು ಕ್ರೀಡಾಕೂಟಕ್ಕೆ ವಿಶೇಷ ಮೆರಗನ್ನು ನೀಡಿತ್ತು.
ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ ಎಸ್ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ಹೈಕೋರ್ಟ್ ಹಿರಿಯ ವಕೀಲ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎಸ್.ಚಂದ್ರಮೌಳಿ, ಗ್ಯಾರೆಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಮೆಹರೋಜ್ ಖಾನ್ , ಉದ್ಯಮಿ ನಾಪಂಡ ಮುತ್ತಪ್ಪ, ಸಂಘದ ಕ್ಷೇಮಾಭಿವೃದ್ಧಿ ಅಧ್ಯಕ್ಷರಾದ ಜಿ. ವಿ ರವಿಕುಮಾರ್, ಸಂಘದ ಅಧ್ಯಕ್ಷರಾದ ಅನಿಲ್ ಹೆಚ್.ಟಿ., ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್, ಉಪವಿಭಾಗಾಧಿಕಾರಿ ನಿತಿನ್ ಛಬ್ಬಿ, ನಗರ ಸಭೆ ಅಧ್ಯಕ್ಷೆ ಕಲಾವತಿ, ಮೂಡಾ ಅಧ್ಯಕ್ಷರಾದ ರಾಜೇಶದ ಯಲ್ಲಪ್ಪ, ಪ್ರಮುಖರಾದ ಮಹೇಶ್ ಜೈನಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ಕಾಳಪ್ಪ, ಪ್ರಮುಖರಾದ ಯಡಿಕೇರಿ ಪ್ರಸನ್ನ, ಅಪ್ಪು ರವೀಂದ್ರ, ತೆನ್ನಿರ ಮೈನಾ, ಸುರಯ್ಯ ಬ್ರಾರ್, ಇಸ್ಮಾಯಿಲ್, ಸೂರಜ್ ಹೊಸೂರು,ಮನು ಮುತ್ತಪ್ಪ,ಚುಮ್ಮಿ ದೇವಯ್ಯ, ಪತ್ರಕರ್ತರ ಸಂಘದ ಪಧಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸುರೇಶ್ ಬಿಳಿಗೇರಿ ಸ್ವಾಗತಿಸಿ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು.




























