ಕುಶಾಲನಗರ ಏ. 10: 2026-27 ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕ್ಯಾಂಪ್ ಮಾಡಬೇಕೆಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮುಖ್ಯಾಧಿಕಾರಿಗಳಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಬೇರೆ ಬೇರೆ ಸ್ಥಳಗಳಲ್ಲಿ ತೆರಿಗೆ ಸಂಗ್ರಹ ಕ್ಯಾಂಪ್ ಮಾಡುವುದರಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗುವುದರ ಜೊತೆಗೆ ಸಾರ್ವಜನಿಕರಿಗೂ ತುಂಬ ಅನುಕೂಲವಾಗಲಿದೆ. ಅನವಶ್ಯಕವಾಗಿ ಕಚೇರಿ ಅಲೆಯುವುದು ತಪ್ಪುತ್ತದೆ. ಸಿಬ್ಬಂದಿಗಳು ಕಚೇರಿಯಲ್ಲಿ ಇದ್ದರೇ ಬಹಳ ಕೆಲಸದ ಒತ್ತಡವಿರುತ್ತದೆ. ಕ್ಯಾಂಪ್ ಮಾಡಿದರೆ ಸಿಬ್ಬಂದಿಗಳು ಕೇವಲ ತೆರಿಗೆ ಸಂಗ್ರಹದ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ. ತಕ್ಷಣವೇ ಕ್ಯಾಂಪ್ ಮಾಡುವುದರಿಂದ ಏಪ್ರಿಲ್ 31 ರವರೆಗೆ ವಿನಾಯಿತಿಯು ಜನರಿಗೆ ದೊರೆಯುತ್ತದೆ ಎಂದು ಅಧ್ಯಕ್ಷ ಕೆ ಎಸ್ ನಾಗೇಶ್ ಹೇಳಿದರು.
ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಪುರಸಭೆ ವತಿಯಿಂದ ಪ್ರತಿವರ್ಷವೂ ಕ್ಯಾಂಪ್ ಮಾಡುತ್ತಿದ್ದೇವೆ. ಈ ವರ್ಷವೂ ಖಂಡಿತ ಜನರ ಅನುಕೂಲಕ್ಕಾಗಿ ಮಾಡುತ್ತೇವೆ ಎಂದರು.
ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆಯನ್ನು ಅವೈಜ್ಞಾನಿಕವಾಗಿ ತೆಗೆದುಕೊಳ್ಳದೆ ನಿಯಮಾನಾಸುರ ಪಡೆಯಲು ತಿಳಿಸಿದಾಗ ಕಮರ್ಷಿಯಲ್ ಶೇಕಡ 5 ಮತ್ತು ರೆಸಿಡೆನ್ಸಿಯಲ್ ಗೆ ಶೇಕಡ 3 ಹೆಚ್ಚಳ ಮಾಡಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಗಿರೀಶ್ ತಿಳಿಸಿದರು.
ಇದೇ ಸಂದರ್ಭ ಚೇಂಬರ್ ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಪಿ.ಕೆ.ಜಗದೀಶ್, ಪಿ.ಎಂ.ಮೋಹನ್, ಕೆ.ಎನ್.ದೇವರಾಜ್ ಮತ್ತಿತ್ತರು ಹಾಜರಿದ್ದರು.




