
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಇದರ ಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ ವಿರಚಿತ ಕವನಗಳು.
ಕವಿತೆ – ೧ ನನ್ನ ಕವಿತೆ
ಬಾನ ಹಕ್ಕಿಗಳು, ಗಗನ ಚುಕ್ಕಿಗಳು
ನನ್ನ ಹೃದಯ ಕವಿತೆ |
ಎತ್ತರೆತ್ತರಕೆ ಹಾರುತೇರುವ
ಮೋಡದೊಳಗೆ ಅವಿತೆ ||ಪ||
ಭಿನ್ನ ಭೇದಗಳು, ಜಾತಿ ವರ್ಣಗಳು
ಎಲ್ಲ ಇಲ್ಲಿ ಶೂನ್ಯ |
ನೆಟ್ಟ ದೃಷ್ಟಿಗಳು, ದಿಟ್ಟ ನಿಲುವುಗಳು
ಮಾತ್ರವಿಲ್ಲಿ ಮಾನ್ಯ ||೧||
ಅನ್ಯರೇಳ್ಗೆಯನು ಸಹಿಸದಾಗುತಿವೆ
ತಮ್ಮತನದ ಸುತ್ತ |
ಮನದ ನಡುವಿನಾ ಅಡ್ಡ ಗೋಡೆಗಳ
ಮೆಟ್ಟಿ ಸಾಗು ಅತ್ತ ||೨||
ಬಂಧ ಬಂಧಗಳ, ಗಂಧ ಮಂದಿರವು
ಅರಳಿ ನಿಲ್ಲಬೇಕು |
ಮನದ ಬೃಂದಗಳು, ಭಾವ ರೆಕ್ಕೆಗಳು
ತೆರೆದು ಕೊಳ್ಳಬೇಕು ||೩||
ಕವಿತೆ – ೨. ಅನುರಾಗ
ಇಲ್ಲಿ ಎಲ್ಲೋ ಸುತ್ತಿ ಅಪ್ಪಿದ
ಪ್ರೀತಿಯ ಗಾಳಿ ಬೀಸುತಿದೆ,
ಕಣ್ಣ ಮುಂದೆ ಸುಳಿದು ಹೋಗುವ
ರೂಪ ಕಾಣದಾಗುತಿದೆ ||ಪ||
ಹೃದಯ ಹೃದಯಗಳ ಬೆಸುಗೆಯ ಕ್ಷಣಗಳು ಮತ್ತೆ ಮತ್ತೆ ಕಾಡುತಿವೆ,
ಚಂದ್ರ ಚಕೋರಿ ರೂಪರಾಶಿಯು
ಕಂಗಳ ದೃಷ್ಟಿಯ ಮುತ್ತುತಿದೆ ||೧||
ಬದುಕಿನ ಅರಮನೆ ಕಟ್ಟುವ ಕನಸಿದೆ
ಬಲದ ಕೊರತೆಯು ಕಾಡುತಿದೆ |
ಕಷ್ಟ ಕಾಲದೊಳು ಕೈಯನು ಹಿಡಿಯುವ
ಸ್ನೇಹದ ಶಕ್ತಿಯು ಮಿಡಿಯುತಿದೆ ||೨||
ಒಣಗಿದೆದೆಯಲಿ ಚಿಲುಮೆ ಚಿಮ್ಮಿರಲು
ಒಲವ ರಾಗದ ಮಿಲನದಲಿ |
ಹೃದಯದೊಲುಮೆಯ ಸಾಹುಕಾರನ
ಮನವದು ಮಿಡಿಯಿತು ಪ್ರೇಮದಲಿ ||೩||




