ಮಡಿಕೇರಿ, ಮಾ.17: ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ದಿವಂಗತ ಜನಾಬ್ ಎಂ.ಎಂ. ಲಿಯಾಕತ್ ಅಲಿ ಅವರ ನಿಧನದ ಪ್ರಯುಕ್ತ ನಿನ್ನೆ ಸೋಮವಾರದಂದು ಸಂತಾಪ ಸೂಚನಾ ಸಭೆ ಮಾಡಿ ದಿವಂಗತರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಶಿಕ್ಷಕರಾದ ಸುಜೋತಿ, ಸುಲತ್ ಹಾಗೂ ನಾಗಯ್ಯ ಶೆಟ್ಟಿ ಅವರು ದಿವಂಗತ ಎಂ.ಎಂ. ಲಿಯಾಕತ್ ಅಲಿ ಅವರ ವ್ಯಕ್ತಿತ್ವ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ನಿಜಾಮುದ್ದೀನ್ ಸಿದ್ದೀಕ್ ಅವರು ಮಾತನಾಡಿ, ಕ್ರೆಸೆಂಟ್ ಶಾಲೆಯನ್ನು ಆರಂಭಿಸುವಲ್ಲಿ ದಿವಂಗತ ಲಿಯಾಕತ್ ಅಲಿ ಅವರು ತೆಗೆದುಕೊಂಡ ಮಹತ್ವದ ನಿರ್ಧಾರಗಳು ಹಾಗೂ ಅವರ ದೂರದೃಷ್ಟಿಯನ್ನು ವಿವರಿಸಿದರು.
ಅವರ ಆತ್ಮೀಯ ಸ್ನೇಹಿತರೂ ಹಾಗೂ ಶಾಲೆಯ ಬಾತ್ಮಿದಾರರಾದ ಮುನೀರ್ ಅವರು ಕೊಡಗು ಜಿಲ್ಲೆಯಲ್ಲಿ ಕನ್ನಡ ಸೇವೆ ಮತ್ತು ಸಮಾಜ ಸೇವೆಗೆ ಲಿಯಾಕತ್ ಅಲಿ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿದರು.
ಶಾಲೆಯ ಕಾರ್ಯದರ್ಶಿಗಳಾದ ಮೊಹಮ್ಮದ್ ಹನೀಫ್ ಅವರು ದಿವಂಗತ ಲಿಯಾಕತ್ ಅಲಿ ಅವರ ಆದರ್ಶ ನಾಯಕತ್ವ, ಶಾಲೆಯ ಅಭಿವೃದ್ಧಿಗೆ ಅವರು ಮಾಡಿದ ಶ್ರಮ ಹಾಗೂ ಕೊಡುಗೆಗಳನ್ನು ನೆನಪಿಸಿಕೊಂಡರು.
ಪೋಷಕ–ಶಿಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ಅವರು ಮಾತನಾಡಿ, ಲಿಯಾಕತ್ ಅಲಿ ಅವರು ಒಬ್ಬ ಉತ್ತಮ ಗಾಯಕರು ಆಗಿದ್ದು, ನಗರದ ಕುವೆಂಪು ಪ್ರತಿಮೆ ನಿರ್ಮಾಣದಲ್ಲಿ ಅವರ ಪಾತ್ರ ಅನನ್ಯವಾಗಿತ್ತು ಎಂದು ಹೇಳಿದರು.
ಪೋಷಕ–ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ಸಾಧಿಯ ಸಿರಾಜ್ ಅವರು ಮಾತನಾಡಿ, ಲಿಯಾಕತ್ ಅಲಿ ಅವರ ಧೈರ್ಯ ಮತ್ತು ಸಮಾಜಪರ ಚಿಂತನೆಗಳನ್ನು ಸ್ಮರಿಸಿದರು.
ಶಾಲೆಯ ನಿರ್ದೇಶಕರಾದ ಉಮರ್ ಅವರು ಮಾತನಾಡಿ, ಶಾಲೆಯ ಬೆಳವಣಿಗೆಯಲ್ಲಿ ಲಿಯಾಕತ್ ಅಲಿ ಅವರು ನೀಡಿದ ಮಾರ್ಗದರ್ಶನ ಮತ್ತು ಶಾಲೆಯ ಅಭಿವೃದ್ಧಿಗಾಗಿ ಅವರಲ್ಲಿದ್ದ ತುಡಿತವನ್ನು ಸ್ಮರಿಸಿಕೊಂಡರು.
ಈ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ನಿಜಾಮುದ್ದೀನ್ ಸಿದ್ದೀಕ್, ಖಜಾಂಚಿ, ಕಾರ್ಯದರ್ಶಿಗಳಾದ ಫಯಾಜ್ ಹಾಗೂ ಮೊಹಮ್ಮದ್ ಹನೀಫ್, ನಿರ್ದೇಶಕರಾದ ಅನೀಸ್, ಉಮರ್, ಪೋಷಕ–ಶಿಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್, ಉಪಾಧ್ಯಕ್ಷರಾದ ಸಾಧಿಯ ಸಿರಾಜ್ ಹಾಗೂ ಶಾಲಾ ಪ್ರಾಂಶುಪಾಲರಾದ ಜಾಯ್ಸ್ ವಿನಯ, ಶಾಲೆಯ ಶಿಕ್ಷಕರು, ಶಿಕ್ಷಕೇತರ ವೃಂದ ಪೋಷಕ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.




